ಮಂಗಳೂರು, ಮೇ 31 : ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ 37 ವರ್ಷಗಳ ಕಾಲ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿಯೂ ವಿಭಾಗ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತರಾಗಿದ್ದ ಡಾ.ಸರಸ್ವತಿ ಎಸ್.ರಾವ್ ಅಲ್ಪಕಾಲದ ಅಸ್ವಾಸ್ಥ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಅಪಾರ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಸದಾ ನಗುಮೊಗದ ವ್ಯಕ್ತಿತ್ವವುಳ್ಳವರಾಗಿದ್ದರು. ಅತೀವ ಕುಟುಂಬ ಪ್ರೇಮವುಳ್ಳವರಾಗಿದ್ದು, ಬಂಧು ಬಾಂಧವರ ಪ್ರೀತಿ ಅಭಿಮಾನ ಗೌರವಕ್ಕೆ ಪಾತ್ರರಾದ ಡಾ. ಸರಸ್ವತಿ ರಾವ್ ನ್ಯಾನೋ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿ ಮಂಗಳೂರು ವಿ.ವಿ.ಯಿಂದ ಡಾಕ್ಟರೇಟ್ ಪಡೆದಿದ್ದರು. ಅಲ್ಲದೆ ‘ನ್ಯಾನೋ ತಂತ್ರಜ್ಞಾನ’, ‘ ಪ್ರಾಚೀನ ಕಾಲದ ಭಾರತೀಯ ವಿಜ್ಞಾನಿಗಳು’ ಎಂಬ ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿದ್ದರು. ಅಜಿಮ್ ಪ್ರೇಮ್ ಜಿ ಯುನಿವರ್ಸಿಟಿಗೋಸ್ಕರ ಪಠ್ಯ ಪುಸ್ತಕಗಳನ್ನೂ ಬರೆದಿದ್ದರು. ಮಾತ್ರವಲ್ಲದೆ ‘ವಿಷ್ಣು ಸಹಸ್ರನಾಮ’ ಸ್ತೋತ್ರದ ವ್ಯಾಖ್ಯಾನವನ್ನೂ ಪುಸ್ತಕರೂಪದಲ್ಲಿ ಪ್ರಕಟಿಸಿದ್ದರು.
ಡಾ. ಸರಸ್ವತಿಯವರು ಪತಿ ಡಾ.ಚ.ನ.ಶಂಕರ ರಾವ್ (ಸಮಾಜಶಾಸ್ತ್ರ ಪಠ್ಯ ಪುಸ್ತಕಗಳ ಪ್ರಸಿದ್ಧ ಲೇಖಕರು) ಮಕ್ಕಳಾದ ಡಾ. ಶ್ರುತಿ , ಸ್ವಾತಿ ಮತ್ತು ದೀಪ್ತಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನೂ ಅನೇಕ ಅಭಿಮಾನಿಗಳನ್ನೂ ಬಿಟ್ಟು ಅಗಲಿದ್ದಾರೆ..


