ಬಂಟ್ವಾಳ: ಕರ್ತವ್ಯದಲ್ಲಿದ್ದಾಗಲೇ ಮೆಸ್ಕಾಂ ಉದ್ಯೋಗಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು ಎಂಬಲ್ಲಿ ನಡೆದಿದೆ.ಮೂಲತಃ ಮಿತ್ತೂರು ನಿವಾಸಿ ಚಂದ್ರಶೇಖರ ನಾಯ್ಕ ( 55) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಚಂದ್ರಶೇಖರ್ ಅವರು ಮೆಸ್ಕಾಂ ಪಾಣೆಮಂಗಳೂರು ಶಾಖೆಯಲ್ಲಿ ಸಹಾಯಕ ಮ್ಯಾಕನಿಕ್ ಹುದ್ದೆಯನ್ನು ನಿರ್ವಹಿಸುತ್ತಿದ್ದರು.ಇಂದು ಮಧ್ಯಾಹ್ನ ವೇಳೆ ಶಂಭೂರು ಸಮೀಪದ ಕುಂದಾಯಗೋಳಿ ಎಂಬಲ್ಲಿ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಕಂಬವನ್ನು ಅಳವಡಿಸಿ ವಿದ್ಯುತ್ ತಂತಿಗಳನ್ನು ಎಳೆದು ಸಂಪರ್ಕ ನೀಡಿದ್ದರು. ಅ ಬಳಿಕ ಅಲ್ಲಿಂದ ಇನ್ನೊಂದು ಕಡೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗೆ ಕರೆ ಬಂದ ಕಾರಣ ಇಲಾಖೆಯ ಸಿಬ್ಬಂದಿ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕುಂದಾಯಗೋಳಿ ಎಂಬಲ್ಲಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ತರಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಅವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರ ಸಹಿತ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.

