ಮಂಗಳೂರು : ಪುತ್ತೂರಿನ ಪೂಜಾ ಆಚಾರ್ಯ ಹಾಗೂ ಕೃಷ್ಣ ಜೆ.ರಾವ್ ನಡುವಿನ ವಿವಾದಿತ ಪ್ರಕರಣಕ್ಕೆ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು, ಜೂನ್ 19ರಂದು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಲಿರುವ ಮಧ್ಯಸ್ಥಿಕೆ (ಮೀಡಿಯೇಶನ್) ಸಭೆಯ ಮೂಲಕ ಪ್ರಕರಣ ಸುಖಾಂತ್ಯ ಕಾಣುವ ವಿಶ್ವಾಸವಿದೆ ಅಂದೇ ಮಗುವಿನ ನಾಮಕರಣ ನಡೆಯುವ ಸಾಧ್ಯತೆ ಇದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಗೆ ಕೃಷ್ಣ ಜೆ.ರಾವ್ ಹಾಗೂ ಅವರ ಕುಟುಂಬ ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಹಲವು ಕಾನೂನು ಹೋರಾಟಗಳು ನಡೆದಿದ್ದು, ಕಳೆದ ತಿಂಗಳು ಹೈಕೋರ್ಟ್ ನ್ಯಾಯಪೀಠವು ಮಗು ಹಾಗೂ ತಾಯಿಯ ಆರೈಕೆಗಾಗಿ ಪ್ರತಿ ತಿಂಗಳು ₹75 ಸಾವಿರ ನೀಡುವಂತೆ ಆದೇಶಿಸಿತ್ತು ಎಂದು ಹೇಳಿದರು.
ನಿಗದಿತ ಅವಧಿಯಲ್ಲಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ವಿಷಯವನ್ನು ಮತ್ತೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಇತ್ತೀಚಿನ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದು, ನ್ಯಾಯಾಲಯ ಅದಕ್ಕೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಲಯವು ಈಗಾಗಲೇ ಠೇವಣಿ ಇಡಲಾಗಿದ್ದ ₹75 ಸಾವಿರ ಬಿಡುಗಡೆ ಮಾಡುವಂತೆ ಹಾಗೂ ನಾಲ್ಕು ದಿನಗಳೊಳಗೆ ಮತ್ತೊಂದು ₹75 ಸಾವಿರವನ್ನು ಮಗು ಮತ್ತು ತಾಯಿಯ ಖಾತೆಗೆ ಜಮಾ ಮಾಡುವಂತೆ ಆದೇಶಿಸಿದೆ. ಜೂನ್ 19ರಂದು ಹಿರಿಯ ವಕೀಲೆ ಸುಶೀಲ ಅವರ ಸಮ್ಮುಖದಲ್ಲಿ ಮಧ್ಯಸ್ಥಿಕೆ ಸಭೆ ನಡೆಯಲಿದ್ದು, ಜೂನ್ 30ರಂದು ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಪೂಜಾ ಆಚಾರ್ಯರಿಗೆ ನ್ಯಾಯ ದೊರಕಬೇಕು ಹಾಗೂ ಅವರ ಕುಟುಂಬ ಜೀವನ ಸುಗಮವಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಆರಂಭದಿಂದಲೂ ಇದೇ ನಮ್ಮ ಬೇಡಿಕೆಯಾಗಿದ್ದು, ಇಂದಿಗೂ ಅದೇ ನಿಲುವು ಮುಂದುವರಿದಿದೆ ಎಂದು ನಂಜುಂಡಿ ಹೇಳಿದರು.
ಕೃಷ್ಣ ಜೆ. ರಾವ್ ಹಾಗೂ ಅವರ ಕುಟುಂಬ ಸಂಧಾನದತ್ತ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಯಾವುದೇ ತಂದೆ-ತಾಯಿ ಇಂತಹ ಪರಿಸ್ಥಿತಿಯನ್ನು ಬಯಸುವುದಿಲ್ಲ. ಆದರೆ ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದಿರುವುದು ಸಂತಸದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
ಜೂನ್ 19ರಂದು ನಡೆಯಲಿರುವ ಮಧ್ಯಸ್ಥಿಕೆ ಸಭೆಯಲ್ಲಿ ಪೂಜಾ ಹಾಗೂ ಮಗುವಿಗೆ ನ್ಯಾಯ ದೊರಕುವಂತಹ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸವಿದೆ. ಪ್ರಕರಣದ ಕುರಿತು ಅನಗತ್ಯ ಗೊಂದಲಗಳು ಸೃಷ್ಟಿಯಾಗದಂತೆ ಹಾಗೂ ನ್ಯಾಯಾಲಯದಲ್ಲಿ ನಡೆದ ಬೆಳವಣಿಗೆಗಳನ್ನು ಸಾರ್ವಜನಿಕರ ಗಮನಕ್ಕೆ ತರಲು ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮುಖಂಡರಾದ ಲಗ್ಗರೆ ರವಿಕುಮಾರ್, ಜನಾರ್ದನ ಆಚಾರ್ಯ, ಲೋಕೇಶ್ ಕಿಟ್ಟಣ್ಣಿ, ಜಗದೀಶ್ ವೀಣೆ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಆಚಾರ್ಯ, ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


