ಉಳ್ಳಾಲ: ಕಳೆದ ಸೋಮವಾರದಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಕೊಣಾಜೆಯ ಯುವಕನೋರ್ವನ ಶವವು ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಪತ್ನಿಯಿಂದ ವಿಚ್ಚೇದನಗೊಂಡ ಖಿನ್ನತೆಯಲ್ಲಿ ಯುವಕ ಆತಹತ್ಯೆಗೈದಿರೋದಾಗಿ ಶಂಕಿಸಲಾಗಿದೆ.

ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿಯ ನಿವಾಸಿ ದಿನೇಶ್ ಶೆಟ್ಟಿಗಾರ್ ಎಂಬವರ ಪುತ್ರ ವಿವೇಕ್ ಶೆಟ್ಟಿಗಾರ್ ( 32) ಮೃತ ಯುವಕನಾಗಿದ್ದಾನೆ.
ಮಂಗಳೂರಿನ ಕದ್ರಿಯ ವೇದ ಮೋಟಾರ್ಸ್ ನಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು.ಅಂದು ರಾತ್ರಿ 9 ಗಂಟೆಯ ಸುಮಾರಿಗೆ ತಾಯಿಗೆ ಫೋನ್ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ. ಮಧ್ಯರಾತ್ರಿ 12ಗಂಟೆಯಾದರೂ ಮಗ ಮನೆಗೆ ವಾಪಸ್ಸು ಬರದೇ ಇದ್ದ ಕಾರಣ ತಾಯಿ ಪೋನ್ ಮಾಡಿದ್ದು, ವಿವೇಕ್ ಕರೆಯನ್ನ ಸ್ವೀಕರಿಸಿರಲಿಲ್ಲ. ವಿವೇಕ್ ಮಂಗಳವಾರವೂ ಮನೆಗೂ ಬಾರದೆ, ಮೊಬೈಲ್ ಕರೆಯನ್ನು ಸ್ವೀಕರಿಸದೇ ಇದ್ದಾಗ ಗಾಬರಿಗೊಂಡ ಮನೆಯವರು ಎಲ್ಲಾ ಕಡೆ ಹುಡುಕಾಡಿದ್ದು, ಕೊನೆಗೆ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ವಿವೇಕ್ ಅವರ ದ್ವಿಚಕ್ರ ವಾಹನದ ಜೊತೆ ಪಾದರಕ್ಷೆಗಳು ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲಕಿನಾರೆಯಲ್ಲಿ ಪತ್ತೆಯಾಗಿತ್ತು.
ಮೃತ ವಿವೇಕ್ ವಿವಾಹಿತನಾಗಿದ್ದು ಪತ್ನಿ ಆತನಿಂದ ವಿಚ್ಚೇದನ ಪಡೆದು ಕೆಲ ದಿನಗಳ ಹಿಂದಷ್ಟೆ ಬೇರೆ ಮದುವೆಯಾಗಿದ್ದಾರಂತೆ. ಇದೇ ವಿಚಾರದಲ್ಲಿ ವಿವೇಕ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರೋದಾಗಿ ಶಂಕಿಸಲಾಗಿದೆ.

ಮೃತ ವಿವೇಕ್ ತಂದೆ, ತಾಯಿ ಮತ್ತು ಏಕೈಕ ಸಹೋದರಿಯನ್ನು ಅಗಲಿದ್ದಾರೆ.

