ಮಂಗಳೂರು : ಸುಮಾರು 1200 ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ಧ ಕಳವಾರು ಶ್ರೀ ಬೆಂಕಿನಾಥೇಶ್ವರ ಕ್ಷೇತ್ರದಲ್ಲಿ ಮಾರ್ಚ್ 20 ರಿಂದ 29ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದಲ್ಲಿ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಗಳು ನಡೆಯಲಿದ್ದು. ಮಾರ್ಚ್ 27 ಶುಕ್ರವಾರದಂದು ಬೆಳಿಗ್ಗೆ ಗಂಟೆ 10-51ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಬೆಂಕಿನಾಥೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಬಿ. ರವೀಂದ್ರ ರಾವ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕ್ಷೇತ್ರದ ಭಕ್ತರು ಹಾಗೂ ಸ್ಥಳೀಯ ಶಾಸಕರು ಮತ್ತು ಸಂಸದರ ಮುತುವರ್ಜಿಯಿಂದ ಎಂ.ಆರ್.ಪಿ.ಎಲ್. ಸಂಸ್ಥೆಯ ಸಹಕಾರದಿಂದ ಸುಮಾರು 2.5 ಕೋಟಿ ವೆಚ್ಚದಲ್ಲಿ ವಿವಿಧ ಜೀಣೋದ್ಧಾರ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಈ ಸುಸಂದರ್ಭದಲ್ಲಿ “ಶ್ರೀ ಬೆಂಕಿನಾಥೇಶ್ವರ” ದೇವಳದ ವಿಷಯಗಳನ್ನು ದಾಖಲೀಕರಿಸುವ ನಿಟ್ಟಿನಲ್ಲಿ ಜೊತೆಗೆ ಇತರ ಮೌಲ್ಯಯುತವಾದ ಲೇಖನಗಳನ್ನೊಳಗೊಂಡ ” ಶಿವಸ್ಮೃತಿ” ಎಂಬ ಸ್ಮರಣ ಸಂಚಿಕೆ ಹೊರತರುವ ಸದುದ್ದೇಶವನ್ನು ಇಟ್ಟುಕೊಂಡಿದ್ದೇವೆ. ಭಕ್ತರು, ಹಿತಚಿಂತಕರು, ಜಾಹೀರಾತು ನೀಡಿ ಪ್ರೋತ್ಸಾಹಿಸ ಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಜಗಜೀವನ್ ಶೆಟ್ಟಿ , ಸದಸ್ಯರಾದ ಪದ್ಮನಾಭ ಬಿ ,ಬಾಳ ಗಂಗಾಧರ ಪೂಜಾರಿ , ಯತಿರಾಜ್ ಡಿ. ಸಾಲ್ಯಾನ್, ಚೇತನ್ ಕುಮಾರ್ ಜೋಗಿ ಮುಂತಾದವರು ಉಪಸ್ಥಿತರಿದ್ದರು .

