ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರಿಗೆ ಸೇರಿದ ಹೈದರಾಬಾದ್ನ ಶ್ರೀನಗರ ಕಾಲೋನಿಯಲ್ಲಿರುವ ಐಷಾರಾಮಿ ಬಂಗಲೆಯನ್ನು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಂಗಳವಾರ ಸೀಲ್ ಮಾಡಿದ್ದಾರೆ. ಸುಮಾರು 1.5 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

2016ರಲ್ಲಿ ಜಯಲಲಿತಾ ಅವರು ನಿಧನರಾದ ನಂತರ, ಈ ಆಸ್ತಿಗೆ ಸಂಬಂಧಿಸಿದ ತೆರಿಗೆ ಪಾವತಿಯಲ್ಲಿ ಗೊಂದಲಗಳು ಉಂಟಾಗಿವೆ. ಜಿಎಚ್ಎಂಸಿ ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಬಂಗಲೆಯು 2017 ರಿಂದಲೂ ತೆರಿಗೆ ಸುಸ್ತಿದಾರರ ಪಟ್ಟಿಯಲ್ಲಿದೆ. ಈ ಕುರಿತು ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಹಲವು ಬಾರಿ ಅಧಿಕೃತ ನೋಟಿಸ್ಗಳನ್ನು ರವಾನಿಸಲಾಗಿತ್ತು. ಇತ್ತೀಚೆಗೆ ಫೆಬ್ರವರಿ ತಿಂಗಳಲ್ಲೂ ಹೊಸದಾಗಿ ಎಚ್ಚರಿಕೆ ನೋಟಿಸ್ ನೀಡಲಾಗಿತ್ತು. ಆದರೆ, ನಿಗದಿತ ಸಮಯದೊಳಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅಥವಾ ತೆರಿಗೆ ಪಾವತಿಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಸ್ತಿಗೆ ಬೀಗ ಹಾಕಿ ಮೊಹರು ಮಾಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಈ ಮನೆಯನ್ನು ಈ ಹಿಂದೆ ಖ್ಯಾತ ಉದ್ಯಮಿ ವಿಜಯ್ ಮಲ್ಯ ಅವರಿಗೆ ಗುತ್ತಿಗೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಮಲ್ಯ ಅವರು ಈ ಬಂಗಲೆಯನ್ನು ಬಳಸುತ್ತಿದ್ದ ಅವಧಿಯಲ್ಲೇ ತೆರಿಗೆ ಬಾಕಿ ಮೊತ್ತ ಏರಿಕೆಯಾಗಲು ಶುರುವಾಯಿತು ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದಶಕಗಳಿಂದ ಸಂಗ್ರಹವಾಗಿದ್ದ ಈ ಬಾಕಿ ಮೊತ್ತವು ಬಡ್ಡಿಯೂ ಸೇರಿ ಈಗ 1.5 ಕೋಟಿ ರೂಪಾಯಿಗಳಿಗೂ ಹೆಚ್ಚು ತೆರಿಗೆ ಬಾಕಿ ಇದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ವಾರಗಳಲ್ಲಿ ಹೈದರಾಬಾದ್ನಾದ್ಯಂತ ತೆರಿಗೆ ಪಾವತಿಸದ 100ಕ್ಕೂ ಹೆಚ್ಚು ದೊಡ್ಡ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.

