ಮಂಗಳೂರು : ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗವಾಗಿ ಮೂಡಿ ಬರುತ್ತಿರುವ ಹಾಗೂ ಕರಾವಳಿಯ ಕಲಾವಿದರು ನಟಿಸಿರುವ ಹಾಸ್ಯಮಯ ಕನ್ನಡ ಸಿನೆಮಾ “ವಾದಿರಾಜ ವಾಲಗ ಮಂಡಳಿ” ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸಂಕಲನ, ಹಿನ್ನೆಲೆ ಸಂಗೀತ ಹಾಗೂ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ಚಿತ್ರದ ನಿರ್ಮಾಪಕರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಮ್.ಎನ್.ಆರ್. ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ವಿಶಿಷ್ಟ ಕಥಾಹಂದರ, ಹೊಸ ಶೀರ್ಷಿಕೆ ಹಾಗೂ ಕಲಾವಿದರ ವಿಭಿನ್ನ ಗೆಟಪ್ ಮೂಲಕ ಸಿನಿಪ್ರೇಮಿಗಳಲ್ಲಿ ಈಗಾಗಲೇ ಕುತೂಹಲ ಹುಟ್ಟಿಸಿದೆ. ಕರಾವಳಿ ಕನ್ನಡದ ಸೊಗಡನ್ನು ಹೊಂದಿರುವ ಈ ಸಿನಿಮಾ ರಾಜ್ಯದ ಎಲ್ಲಾ ಭಾಗದ ಪ್ರೇಕ್ಷಕರನ್ನೂ ಸೆಳೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ ಎಂದರು.
“ವರಾಹ ರೂಪಂ” ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕತೆ ಹಾಗೂ ಸಂಭಾಷಣೆಯ ಜೊತೆಗೆ ನಿರ್ದೇಶನದ ಹೊಣೆಗಾರಿಕೆಯನ್ನು ಅವರು ನಿರ್ವಹಿಸಿದ್ದಾರೆ. ಸುಮಾರು 50 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದಲ್ಲಿ ಹಾಸ್ಯ, ಭಾವನೆ ಹಾಗೂ ಸಾಮಾಜಿಕ ಅಂಶಗಳನ್ನು ಸಂಯೋಜಿಸಿ ಸಂಪೂರ್ಣ ಮನರಂಜನಾ ಪ್ಯಾಕೇಜ್ ರೂಪಿಸಲಾಗಿದೆ. ಕುಟುಂಬ ಸಮೇತ ವೀಕ್ಷಿಸಬಹುದಾದ ಚಿತ್ರವಾಗಿದ್ದು, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದರು.
ಕರಾವಳಿಯ ಜನಪ್ರಿಯ ಕಲಾವಿದರಾದ ನವೀನ್ ಡಿ. ಪಡೀಲ್, ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ,ಶೋಭರಾಜ್ ಪಾವೂರು, ಚೇತನ್ ರೈ.ಮಾಣಿ, ಪುಷ್ಪರಾಜ್ ಬೊಳ್ಳಾರ್, ಗೋಪಿನಾಥ್ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ವೇದಾಂತ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ ಅಭಿನಯಿಸಿದ್ದು, ತನ್ವಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ನಟಿಸಿದ್ದಾರೆ. ಲಕ್ಷ್ಮಣ ಕುಮಾರ್ ಮಲ್ಲೂರು ಸೇರಿದಂತೆ ಹಲವು ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.

ಚಿತ್ರದ ಚಿತ್ರೀಕರಣಕ್ಕೆ Arri LF ಅತ್ಯಾಧುನಿಕ ಕ್ಯಾಮೆರಾ ಬಳಕೆಯಾಗಿದೆ. ಛಾಯಾಗ್ರಹಣವನ್ನು ಎಸ್. ಚಂದ್ರಶೇಖರನ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆಯನ್ನು ಮಣಿಕಾಂತ್ ಕದ್ರಿ ನೀಡಿದ್ದಾರೆ. ಸಾಹಸ ನಿರ್ದೇಶನವನ್ನು ಟೈಗರ್ ಶಿವು ಮಾಡಿದ್ದು, ವಿವಿಧ ಭಾಷೆಗಳ ಖ್ಯಾತ ಗಾಯಕರು ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿದ್ದು, ಸಂತೋಷ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜೇಶ್ ಕುಡ್ಡ ಹಾಗೂ ಕಾರ್ತಿಕ್ ಪ್ರೊಡಕ್ಷನ್ ಮ್ಯಾನೇಜರ್ಗಳಾಗಿ ಸಹಕರಿಸಿದ್ದಾರೆ.
ಆಗಸ್ಟ್ನಲ್ಲಿ ಭರ್ಜರಿ ಬಿಡುಗಡೆ
ಕರಾವಳಿ ಭಾಷೆಯ ನೈಜತೆಯನ್ನು ಉಳಿಸಿಕೊಂಡು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುವಂತೆ ನಿರ್ಮಾಣಗೊಂಡಿರುವ “ವಾದಿರಾಜ ವಾಲಗ ಮಂಡಳಿ” ಸಿನಿಮಾ ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರಕ್ಕೆ ಉತ್ತಮ ನಿರೀಕ್ಷೆ ವ್ಯಕ್ತವಾಗಿದ್ದು, ಬಿಡುಗಡೆಯ ಬಳಿಕ ಉತ್ತಮ ಪ್ರತಿಕ್ರಿಯೆ ಸಿಗುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರು, ಮೇಘರಾಜ್, ವಾದಿರಾಜ ವಾಲಗ ಮಂಡಳಿ ಚಿತ್ರದ ನಿರ್ದೇಶಕ ಶಶಿರಾಜ್ ಕಾವೂರು, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಹ ನಿರ್ದೇಶಕ ಜಯಪ್ರಕಾಶ್ ತುಂಬೆ, ನಟ ಅರ್ಜುನ್ ವೇದಾಂತ್, ವೇನ್ಯ ರೈ, ಮೈಮ್ ರಾಮದಾಸ್, ರಾಜೇಶ್ ಕುಡ್ಲ, ಶೋಭಾರಾಜ್ ಪಾವೂರು, ಅಕ್ಷತ ವಿಟ್ಲ, ಗೋಪಿನಾಥ್ ಭಟ್ , ಚೇತನ್ ರೈ ಮಾಣಿ ಹಾಗೂ ಇನ್ನಿತೃರರು ಉಪಸ್ಥಿತರಿದ್ದರು.

