ಮಂಗಳೂರು : 2014ರಲ್ಲಿ ಮಂಗಳೂರಿನ ಹೊಸಬೆಟ್ಟುವಿನಲ್ಲಿ ನಡೆದಿದ್ದ ಮಹಿಳೆಯ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರಾಜಸ್ಥಾನದ ಶಿವರಾಮ್ ಹಾಗೂ ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ ಎಂದು ಗುರುತಿಸಲಾಗಿದೆ.
2014 ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿಯಾದ ಸುಮತಿ ಪ್ರಭು ಎಂಬವರನ್ನು ಕುತ್ತಿಗೆಗೆ ಚೂರಿಯಿದ ಕೊಯ್ದು ಕೊಲೆ ಮಾಡಿ ಮೈಮೇಲಿದ್ದ ಸುಮಾರು 3,80,000 ಬೆಲೆಬಾಳುವ 192 ಗ್ರಾಂ (24 ಪವನ್) ತೂಕದ ಬಂಗಾರದ ಒಡವೆಗಳನ್ನು ದೋಚಿಕೊಂಡು ಹೋದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿತರ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದಂತೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್.ಸಿ ನಂ 80/2014 & ಎಸ್.ಸಿ ನಂ 105/2024 ರಂತೆ ವಿಚಾರಣೆಯಲ್ಲಿದೆ.
ಪ್ರಕರಣದ ಆರೋಪಿತನಾದ ಬಹದ್ದೂರ್ ಸಿಂಗ್ @ ಬಹದ್ದೂರ್ @ ಬಯ್ಯ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟನ್ನು ಹೊರಡಿಸಿತ್ತು.
ಆರೋಪಿಯು ರಾಜಸ್ಥಾನ ರಾಜ್ಯದ ವಿಳಾಸದಲ್ಲಿ ವಾಸವಿರದೇ ಇದ್ದು ದಸ್ತಗಿರಿ ಮಾಡಲು ಅನಾನುಕೂಲವಾದ್ದರಿಂದ ಈತನ ಮೇಲೆ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿತ್ತು. ಆರೋಪಿಯ ಬಗ್ಗೆ ಮಾಹಿತಿ ಪಡೆದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಗೆ ತೆರಳಿ 2ನೇ ಆರೋಪಿಯಾದ ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

