ಮಂಗಳೂರು: ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ `ಗಜಾನನ ಕ್ರಿಕೆಟರ್ಸ್ (ಜಂತೊಟ್ಟು ಸಿನ್ಸ್ 1983)’ ತುಳು ಚಲನಚಿತ್ರವು ಮೇ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಕುಂದಾಪುರ, ಮಣಿಪಾಲ ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ ಮೊದಲಾದ ಕಡೆಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ನಟ, ನಿರ್ಮಾಪಕ ಪ್ರಜ್ವಲ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಬಿಜೈಯಲ್ಲಿರುವ ಅಜಂತಾ ಬಿಸಿನೆಸ್ ಸೆಂಟರ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ತುಳು ಭಾಷೆಯಲ್ಲಿನ ದೊಡ್ಡ ಬಜೆಟ್ ಚಿತ್ರವಾಗಿದ್ದು, ಕ್ರಿಕೆಟ್ ಮತ್ತು ಆಟಗಾರರ ಬದುಕಿನ ಹಿನ್ನಲೆ ಆಧಾರಿತ ಕತೆ ಹೊಂದಿದೆ. ಚಿತ್ರದಲ್ಲಿ ಹಾಸ್ಯ, ಪ್ರೇಮಪೂರಿತ ಭಾವನೆಗಳು ಮತ್ತು ಸಮಾಜಮುಖಿ ಸಂದೇಶವಿರುವ ಬಿಗು ಕತೆ ಒಳಗೊಂಡಿದೆ. ಕೀರ್ತನ್ ಭಂಡಾರಿ ಅವರು ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಮಂಗಳೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ತಾನು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ ಎಂದು ಹೇಳಿದರು.

ಚಿತ್ರದ ತಾರಾಗಣದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಅನ್ವಿತಾ ಸಾಗರ್, ಸಮತಾ ಅಮೀನ್, ಸರ್ವೋತ್ತಮ ಶೆಟ್ಟಿ ಅಬುದಾಭಿ, ವಾಲ್ಟರ್ ನಂದಳಿಕೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ರೂಪ ವರ್ಕಾಡಿ, ಲಂಚುಲಾಲ್, ಸಚಿನ್ ಮಾಡ, ಜೇಮ್ಸ್ ಮೆಂಡೋನ್ಸಾ, ಕರಣ್ ಪೂಜಾರಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ವಿನುತ್ ಕೆ. ಸುವರ್ಣ ಅವರ ಛಾಯಾಗ್ರಹಣ, ಸುಜಯ್ ಶಿವರಾಮ್ ಹಾಗೂ ಕೌಶಿಕ್ ಭಂಡಾರಿ ಅವರ ಸಂಕಲನ ಇದೆ. ಗೀತಾ ಸಾಹಿತ್ಯವನ್ನು ಕೀರ್ತನ್ ಭಂಡಾರಿ, ಸೃಜನ್ ಮಾನವ್, ಶ್ರೀನಿಧಿ ಶೆಟ್ಟಿ ರಚಿಸಿದ್ದಾರೆ.ಸಹ ನಿರ್ಮಾಪಕರು ರೋಹನ್ ಪಿರೇರ ವಾಮಂಜೂರು ಮತ್ತು ಸಂತೋಷ್ ಲಾಡ್, ಸಂಗೀತ: ಸೃಜನ್ ಕುಮಾರ್ ತೋನ್ಸೆ.

ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆಗೊಂಡಿದ್ದು,
ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

ಪತ್ರಿಕಾಗೋಷ್ಠಿಯಲ್ಲಿ ನಟ ವಿನೀತ್ ಕುಮಾರ್, ಸಮತಾ ಅಮೀನ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸಹ ನಿರ್ಮಾಪಕರಾದ ರೋಹನ್ ಪಿರೇರಾ ವಾಮಂಜೂರು, ಸಂತೋಷ್ ಲಾಡ್, ಸುರೇಶ್ ರಾವ್ ಕೊಕ್ಕಡ ಮೊದಲಾದವರು ಉಪಸ್ಥಿತರಿದ್ದರು.

