ಧಾರವಾಡ : ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಜಿಲ್ಲಾ ಮತ್ತು ತಾಲೂಕು ಘಟಕಗಳ 5 ದತ್ತಿ ಕಾರ್ಯಕ್ರಮಗಳ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಜೂನ್-25 ರಂದು ಮುಂಜಾನೆ 11 ಗಂಟೆಗೆ ಕಸಾಪ ದತ್ತಿ ಉಪನ್ಯಾಸ, ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ನಾಡು-ನುಡಿ ಗೀತಗಾಯನ ಕಾರ್ಯಕ್ರಮ ಜರುಗಲಿವೆ.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹವ್ಯಾಸೀ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಹಾಗೂ ಶಿಕ್ಷಕ ಮುಖಂಡ ಗುರು ತಿಗಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಎಂ. ಹುಲಗೂರ ಅಧ್ಯಕ್ಷತೆವಹಿಸುವರು.
ದತ್ತಿ ಉಪನ್ಯಾಸ : ವಿಶ್ರಾಂತ ಅಧ್ಯಾಪಕ ಸುರೇಶ ಕುಲಕರ್ಣಿ ದತ್ತಿ ಉಪನ್ಯಾಸ ನೀಡಲಿದ್ದು, ಕಲಾವಿದೆ ಪ್ರಮಿಳಾ ಜಕ್ಕಣ್ಣವರ ಕನ್ನಡ ಗೀತಗಾಯನ ಮಾಡುವರು. ವಿದ್ಯಾರ್ಥಿನಿಯರಾದ ವಿನೋದಾ ಕಂಬಳಿ, ಅಕ್ಷತಾ ರುದ್ರಪ್ಪನವರ ಹಾಗೂ ಲಕ್ಷ್ಮಿ ಕರಡಿಗುಡ್ಡ ಅವರಿಗೆ ಕಸಾಪ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು.
ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎನ್.ಬಿ.ಅಮರಗೋಳ, ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ಲ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಪ್ರೊ.ಕೆ.ಎಸ್.ಕೌಜಲಗಿ, ಡಾ.ಜಿನದತ್ತ ಹಡಗಲಿ, ಮುಂತಾದವರು ಪಾಲ್ಗೊಳ್ಳುವರೆಂದು ಕಸಾಪ ತಾಲೂಕು ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


