ಮಂಗಳೂರು : ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದಾರೆ ಮತ್ತು ಬಂಧನಕ್ಕಾಗಿ ಕೇರಳ ಹಾಗು ಕೊಡಗಿನಲ್ಲಿ ಬಲೆ ಬೀಸಿದ್ದಾರೆ.
ಇದೇ ವೇಳೆ, ಕೃತ್ಯದಲ್ಲಿ ಭಾಗಿಯಾದ ನಟೋರಿಯಸ್ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ್ದು ಇವರ ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.
ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು ಆತನದ್ದು ಸೇರಿ ಒಟ್ಟು 14 ಮಂದಿ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ ಶ್ರೀರಾಗ್, ಅತುಲ್, ಮಿಥುನ್ಲಾಲ್, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್, ಜಮೀರ್ ಅಲಿಕಾ ಎಂಬವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಾರಣ ಆರೋಪಿಗಳ ಬಂಧನಕ್ಕೆ ಸಹರಿಸುವಂತೆ ಮಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ಹಾಗೂ ಕೇರಳದಲ್ಲಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳ ಫೋಸ್ಟರ್ ಅಂಟಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಮಂಗಳೂರು ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಆರೋಪಿಗಳ ಸುಳಿವು ಸಿಗದ ಕಾರಣ ಫೋಟೊ ಬಿಡುಗಡೆ ಮಾಡಿದ್ದಾರೆ.
ಜೂನ್ 29 ರ ನಸುಕಿನಲ್ಲಿ ಮಂಗಳೂರಿನ ಬೈಕಂಪಾಡಿ ಬಳಿಯ ಹೆದ್ದಾರಿ ಮಧ್ಯೆ ಕಾರಿನಲ್ಲಿ ಬರುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಸಹಕರಿಸಿದ ಮೂವರನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲಕ್ಕೇರಿ ಮೂಲದ ನಿಮಿಲ್, ಮಡಿಕೇರಿ ಮೂಲದ ಇರ್ಷಾದ್ ಮತ್ತು ಮುಸ್ತಾಫ ಎಂಬವರು ಬಂಧಿತರು. ಕಾರಿನಲ್ಲಿ ಬರುತ್ತಿದ್ದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಮೇಲೆ ಹಲ್ಲೆಗೈದು 180 ಗ್ರಾಂ ಚಿನ್ನ ಸಹಿತ 23 ಲಕ್ಷ ಮೌಲ್ಯದ ವಸ್ತುಗಳನ್ನು ಇವರು ದರೋಡೆ ಮಾಡಿದ್ದರು.

