ಮಂಗಳೂರು: ಕಡಲ ಸೃಷ್ಟಿ ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಸಂಜೀವ ಕೆ. ಅವರ ರಚನೆಯ ‘ಶ್ರೀ ಗುರು ಚರಣಾಮೃತ’ ಹಾಗೂ ‘ತೀಯಾ ಕುಲ ತಿಲಕ ಮಹಾದಾನಿ ರೋಹಿದಾಸ್ ಬಂಗೇರ’ ಅವರ ವ್ಯಕ್ತಿ ಪರಿಚಯ ಕೃತಿಯನ್ನು ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈನ ಸಮಾಜಸೇವಕ ಶಂಕರ ಸುವರ್ಣ, ಉದ್ಯಮಿ ಗೋವಿಂದ ಮಂಜೇಶ್ವರ ಹಾಗೂ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಮಾಜದ ಸಾಧಕರ ಜೀವನ, ಮೌಲ್ಯಗಳು ಹಾಗೂ ಸೇವೆಯನ್ನು ದಾಖಲಿಸುವ ಇಂತಹ ಕೃತಿಗಳು ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯಾಗಿದ್ದು, ಯುವ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಜಯಂತಿ ಸುವರ್ಣ ನಿರೂಪಿಸಿದರು. ಕೃತಿಕಾರ ಸಂಜೀವ ಕೆ. ಉಪಸ್ಥಿತರಿದ್ದರು. ಸಾಹಿತ್ಯಾಸಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

