ತಮಿಳುನಾಡಿನ ಕರೂರಿನಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತದ ಬಳಿಕ ಮುಖ್ಯಮಂತ್ರಿ ವಿಜಯ್ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ದೊಡ್ಡ ಮಟ್ಟದ ಪರಿಹಾರ ಪ್ಯಾಕೇಜ್ ಘೋಷಿಸಿದರು.ಕರೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ ಅಲ್ಲದೆ, ಗಾಯಾಳುಗಳಿಗೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಹಲವು ಹಂತಗಳಲ್ಲಿ ನೆರವು ಘೋಷಿಸಿದರು
ಕರೂರು ದುರಂತದಲ್ಲಿ ಮೃತಪಟ್ಟ 41 ಜನರ ಪ್ರತಿಯೊಂದು ಕುಟುಂಬಕ್ಕೂ ತಲಾ ₹20 ಲಕ್ಷ ನಗದು ಪರಿಹಾರ ಅಲ್ಲದೆ ಘಟನೆಯಲ್ಲಿ ಗಾಯಗೊಂಡ 100ಕ್ಕೂ ಹೆಚ್ಚು ಜನರಿಗೆ ತಲಾ ₹2 ಲಕ್ಷ ಧನಸಹಾಯ ನೀಡಲಾಗುವುದು ಎಂದು ಹೇಳಿದರು. ಇದರ ಜೊತೆಗೆ, ಸಂತ್ರಸ್ತ ಕುಟುಂಬಗಳ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಭರವಸೆ ನೀಡಿದ ಅವರು, ಕುಟುಂಬಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗದ ಜವಾಬ್ದಾರಿಯನ್ನೂ ಸರ್ಕಾರ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.ಅಲ್ಲದೆ ಸಂತ್ರಸ್ತರಾದ 32 ಕುಟುಂಬಗಳಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ ವಿಜಯ್, ಆ ಕುಟುಂಬಗಳ ಕೆಲವರಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ಕ್ರಮವು ಕೇವಲ ಆರ್ಥಿಕ ಪರಿಹಾರವಲ್ಲ, ಕುಟುಂಬಗಳ ಪುನರ್ವಸತಿ ಮತ್ತು ಭದ್ರ ಭವಿಷ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶ ನೀಡುತ್ತದೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ವಿಜಯ್ ಭಾವುಕರಾಗಿ, “ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿದ ದಿನ ನನ್ನ ಜೀವನದ ಅತ್ಯಂತ ನೋವಿನ ಕ್ಷಣ. ಆ ದಿನ ನನಗೆ ಆಗಿದ್ದ ನೋವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ನನ್ನ ಸ್ವಂತ ತಮಿಳು ಸಹೋದರರನ್ನು ಕಳೆದುಕೊಂಡಿದ್ದೇನೆ” ಎಂದು ಹೇಳಿದರು.
ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯ್, ಅಂದು ಸರ್ಕಾರ ಸರಿಯಾದ ಭದ್ರತಾ ಕ್ರಮ ಕೈಗೊಂಡಿದ್ದರೆ ಇಷ್ಟು ಪ್ರಾಣಹಾನಿ ಆಗುತ್ತಿರಲಿಲ್ಲ” ಎಂದು ಕಿಡಿಕಾರಿದರು.“ಡಿಎಂಕೆ ಸರ್ಕಾರ ಎಲ್ಲಾ ಇಲಾಖೆಗಳ ಹಣವನ್ನು ಲೂಟಿ ಮಾಡಿದೆ. ಕೋಟಿ ಕೋಟಿ ಹಣ ಎಲ್ಲಿಗೆ ಹೋಯಿತು ಎಂಬುದು ಜನರಿಗೆ ತಿಳಿದಿಲ್ಲ. ಕರೂರು ಕಾಲ್ತುಳಿತ ದುರಂತದಲ್ಲೂ ಡಿಎಂಕೆ ರಾಜಕೀಯ ಮಾಡಿದೆ” ಎಂದು ಆರೋಪಿಸಿದರು. ಇದೇ ವೇಳೆ, “ನಾನು ಎಂದಿಗೂ ಹಣದ ಹಿಂದೆ ಹೋಗುವುದಿಲ್ಲ, ಜನರ ಪರ ನಿಂತೇ ಕೆಲಸ ಮಾಡುತ್ತೇನೆ. ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಲಂಚಕ್ಕೆ ಅವಕಾಶ ಇರುವುದಿಲ್ಲ” ಎಂದು ಘೋಷಿಸಿದರು.

