ಧಾರವಾಡ : ಭಾರತದ ಚಾರಿತ್ರಿಕ ಘನತೆಗೆ ಧಕ್ಕೆ ಉಂಟು ಮಾಡಿರುವ ಭ್ರಷ್ಟಾಚಾರವು ರಾಷ್ಟçದ ಸಾಧನಾ ಪಥಕ್ಕೆ ಕಾಲ್ತೊಡಕಾಗಿದ್ದು, ದೇಶವನ್ನು ಮುನ್ನಡೆಸಲಿರುವ ವಿದ್ಯಾರ್ಥಿಗಳು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪಿಸಬೇಕೆಂದು ಲೇಖಕ ಗುರುಮೂರ್ತಿ ಯರಗಂಬಳಿಮಠ ಕರೆ ನೀಡಿದರು.
ಅವರು ಮಂಗಳವಾರ ಇಲ್ಲಿಯ ಆಲೂರ ವೆಂಕಟರಾವ್ ಸಭಾಭವನದಲ್ಲಿ ನಗರದ ಸಿ.ವ್ಹಿ. ರಾಮನ್ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2026-27ನೆಯ ವರ್ಷದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಚರಿತ್ರೆಹೀನರಾಗದೇ ಒಳ-ಹೊರಗನ್ನು ಓರಣವಾಗಿಟ್ಟುಕೊಂಡು ಸರಳತೆ, ಸಜ್ಜನಿಕೆ, ಸತ್ಯನಿಷ್ಠೆ, ಚಾರಿತ್ರಿಕ ಪರಿಶುದ್ಧತೆ, ಶಿಸ್ತು, ಸಮಯಪ್ರಜ್ಞೆ, ಹೃದ್ಯ ಸಹೋದರತ್ವವನ್ನು ಹೊಂದಿದಾಗ ಉನ್ನತ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ತಕ್ಕುದಾದ ವೇದಿಕೆಗಳನ್ನು ಕಲ್ಪಿಸಿ ಎಲ್ಲ ಪ್ರತಿಭೆಗಳು ಬೆಳೆದು ಬಲಗೊಳ್ಳಲು ಸಾಂಸ್ಕೃತಿಕ ಚಟುವಟಿಕೆಗಳು ದಿಕ್ಸೂಚಿಯಾಗಬೇಕು. ಮೌಲ್ಯಯುತ ಶ್ರೇಷ್ಠ ಜೀವನ ವಿಧಾನವಾಗಿರುವ ಭಾರತೀಯ ಸಂಸ್ಕೃತಿಯ ನೆಲೆಗಳಲ್ಲಿ ಸಂಸ್ಕಾರಗಳ ಸಮಷ್ಟಿ ಆಶಯಗಳಿವೆ. ವಿಶಿಷ್ಟ ಜನಪರ ಚಟುವಟಿಕೆಗಳ ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು ಸಾಧ್ಯವಾಗುತ್ತದೆ ಎಂದೂ ಯರಗಂಬಳಿಮಠ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಿರೀಶ ಜುಂಜುರಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ಅನ್ವೇಷಣೆಗಳತ್ತ ಮುಖಮಾಡಿ ಸ್ಪರ್ಧಾತ್ಮಕ ಜಗತ್ತನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ವ್ಯಾಸಂಗದ ವಿಧಾನ ರೂಪಿಸಿಕೊಂಡಾಗ ಮಾತ್ರ ಎಲ್ಲಾ ವಿಧದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಂಪಾದಿಸಬಹುದು ಎಂದು ಸಲಹೆ ನೀಡಿದರು.

ಇನ್ನೋರ್ವ ಅಥಿತಿಯಾಗಿದ್ದ ಶಿಕ್ಷಣ ಚಿಂತಕ ಡಾ.ಸತೀಶ ಜಾಧವ ಮಾತನಾಡಿ, ಯೌವ್ವನದ ಕಾಲಘಟ್ಟವನ್ನು ಧನಾತ್ಮಕವಾಗಿ ಸ್ವೀಕರಿಸಿ ವರ್ಷದುದ್ದಕ್ಕೂ ವ್ಯಾಸಂಗದ ಕ್ಷಣಗಳನ್ನು ವ್ಯರ್ಥಗೊಳಿಸದೇ ಅಧ್ಯಯನದ ತನ್ಮಯತೆ ರೂಢಿಸಿಕೊಂಡಾಗ ನಿರ್ದಿಷ್ಟ ವಿದ್ಯಾರ್ಥಿ ಬದುಕಿನ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಅನುರಾಧಾ ಆರಾಧ್ಯಮಠ ಮಾತನಾಡಿ, ವಿದ್ಯಾರ್ಥಿಗಳ ವ್ಯಾಸಂಗದ ಕ್ಷಣಗಳೆಲ್ಲವೂ ಒಂದು ತಪಸ್ಸು ಇದ್ದಂತೆ. ಅನ್ಯಥಾ ವಿಚಾರಗಳಿಗೆ ಕಿವಿಗೊಡದೇ ಕೇವಲ ಅಧ್ಯಯನದ ವಿಚಾರಗಳಲ್ಲಿ ಆಸಕ್ತಿವಹಿಸಿದರೆ ನಿರೀಕ್ಷಿತ ಮೇರು ಫಲಿತಾಂಶ ನಿಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕಾಲೇಜು ಆಡಳಿತಾಧಿಕಾರಿ ದುಂಡಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಉಪನ್ಯಾಸಕ ಮಾರುತಿ ಕದಂ, ಪ್ರೇಮಾ ಎಸ್., ಬಸವರಾಜ ಇದ್ದರು. ಎಸ್.ಎಂ. ಸಿದ್ಧಾರ್ಥ ಸ್ವಾಗತಿಸಿದರು. ಸ್ನೇಹಾ ಕಂಠಿ ಹಾಗೂ ಕಾವ್ಯಶ್ರೀ ಮಡಿವಾಳರ ನಿರೂಪಿಸಿದರು. ಉಪನ್ಯಾಸಕಿ ತನುಜಾ ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

