ಉಡುಪಿ: ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಪುನೀತ್ ಅತ್ತಾವರ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)–2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಆದೇಶದಂತೆ, 2026ರ ಆಗಸ್ಟ್ 14ರಿಂದ ನವೆಂಬರ್ 13ರವರೆಗೆ ಮೂರು ತಿಂಗಳ ಕಾಲ ಪುನೀತ್ ಅತ್ತಾವರ ಅವರು ಉಡುಪಿ ಜಿಲ್ಲೆಯ ಯಾವುದೇ ಭಾಗಕ್ಕೂ ಪ್ರವೇಶಿಸುವಂತಿಲ್ಲ.
ಮಂಗಳೂರು ಅತ್ತಾವರದ ಬ್ರಹ್ಮ ಸಮಾಜದ ಬಳಿಯ ಮುಂಡಪ್ಪ ಕಂಪೌಂಡ್ ನಿವಾಸಿಯಾಗಿರುವ ಪುನೀತ್ ಅತ್ತಾವರ (39), ಮೋಹನ್ ಕೊಟಾರಿ ಅವರ ಪುತ್ರ ಎಂದು ಜಿಲ್ಲಾಡಳಿತ ಹೊರಡಿಸಿರುವ ನೋಟೀಸಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರವೇಶ ನಿರ್ಬಂಧದ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಅಥವಾ ಹೇಳಿಕೆಗಳಿದ್ದಲ್ಲಿ ಆಗಸ್ಟ್ 13ರಂದು ಮಧ್ಯಾಹ್ನ 12 ಗಂಟೆಯೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಆಕ್ಷೇಪಣೆಯನ್ನು ಆದೇಶ ಜಾರಿಗೊಳಿಸುವ ಸಿಬ್ಬಂದಿಯ ಮೂಲಕ ಅಥವಾ udupidc@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಸ್ವೀಕರಿಸದಿದ್ದಲ್ಲಿ, ಪುನೀತ್ ಅತ್ತಾವರ ಅವರಿಂದ ಯಾವುದೇ ಹೇಳಿಕೆ ಅಥವಾ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನೋಟೀಸು ಜಾರಿಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

