ಹುಬ್ಬಳ್ಳಿ : ಶ್ರಾವಣ ಮಾಸದಲ್ಲಿ ಎರಡು ಪ್ರಕ್ರಿಯೆಗಳು ನಡೆಯುತ್ತವೆ. ಪ್ರಾತಃಕಾಲದಲ್ಲಿ ಇಷ್ಟಲಿಂಗಾರಾಧನೆಯಿಂದ ತನು ಶುದ್ಧವಾದರೆ, ಸಾಯಂಕಾಲ ಮಹಾತ್ಮರ ಪುರಾಣ ಪ್ರವಚನಗಳನ್ನು ಆಲಿಸಿ ಮನ ಶುದ್ಧವಾಗುತ್ತಿದ್ದು, ಮೌಲ್ಯತುಂಬಿದ ಮಾತುಗಳ ಶ್ರವಣವೇ ಶ್ರಾವಣ ಮಾಸದ ಆಚರಣೆಯಾಗಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಸಮೀಪದ ನವನಗರ ಈಶ್ವರ ದೇವಸ್ಥಾನ ಆವರಣದಲ್ಲಿ ನವನಗರ ನಿವಾಸಿಗಳ ಹಿತೋದ್ಧಾರಕ ಸಂಘವು ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಶ್ರೀ ಸಿದ್ಧಾರೂಢಸ್ವಾಮಿ ಮಹಾತ್ಮೆ ಪುರಾಣ ಪ್ರವವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಸಂಸಾರದ ಬಂಧನದಲ್ಲಿ ಸಿಲುಕಿ ಅನೇಕ ವಿಧದ ವಿದ್ಯಮಾನಗಳ ಒತ್ತಡಗಳಲ್ಲಿ ನಲುಗಿರುವ ಮನುಷ್ಯನಿಗೆ ಶ್ರಾವಣ ಮಾಸದ ಪವಿತ್ರ ಸಂದರ್ಭದ ವಿಭಿನ್ನ ಪೂಜಾ ಕೈಂಕರ್ಯಗಳು ಹಾಗೂ ಮಹಾತ್ಮರ ಬದುಕಿನ ಮೌಲಿಕ ವಿಚಾರಗಳಿಂದ ವ್ಯಾಪಕ ಮಾನಸಿಕ ಪ್ರಶಾಂತತೆ ಮತ್ತು ಭಗವಂತನ ನಾಮಸ್ಮರಣೆಯ ಅನುಸಂಧಾನ ಭಾಗ್ಯ ಪ್ರಾಪ್ತವಾಗುತ್ತದೆ ಎಂದರು.
ಶ್ರಾವಣ ಮಾಸದಲ್ಲಿ ನಡೆಯುವ ಅನುಭಾವದ ಆಸ್ವಾದನೆಯಿಂದಾಗಿ ಅಂತರ0ಗದಲ್ಲಿ ಒಂದು ವಿಶಿಷ್ಟ ಅರಿವಿನ ಬೆಳಕು ಪ್ರಾಪ್ತವಾಗುತ್ತದೆ. ಅಂತರಂಗ ಮತ್ತು ಬಹಿರಂಗಗಳ ಎಲ್ಲ ಚಿಂತನೆಯಲ್ಲಿ ಸಾಮ್ಯತೆ ಸಾಧಿಸಿದಾಗ ಮೋಕ್ಷದ ಮಾರ್ಗ ಹತ್ತಿರವಾಗಿ ಮಾನವನ ಅಂತಿಮ ಗುರಿಯಾದ ಸಾಕ್ಷಾತ್ಕಾರ ಸಂಪಾದನೆ ಸಾಧ್ಯವಾಗುತ್ತದೆ ಎಂದೂ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನವನಗರದ ಹಿರಿಯ ನಿವಾಸಿಗಳು ಪುರಾಣ ಪ್ರವಚನ ಉದ್ಘಾಟಿಸಿರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ನವನಗರ ನಿವಾಸಿಗಳ ಹಿತೋದ್ಧಾರಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ, ರಾಘವೇಂದ್ರ ಪೂಜಾರ ಇದ್ದರು. ಗೌರಿ ಮಾತಾ ಮಹಿಳಾ ಮಂಡಳ, ಕಾಶಿ ವಿಶ್ವೇಶ್ವರ ರುದ್ರ ಬಳಗ ಸೇರಿದಂತೆ ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಶಾಂತಯ್ಯ ಹಿರೇಮಠ ಪ್ರಸ್ತುತಪಡಿಸಿದ ಭಕ್ತಿ ಸಂಗೀತಕ್ಕೆ ಮಂಜುನಾಥ ಬಾರಕೇರ ತಬಲಾ ಸಾಥ ನೀಡಿದರು.
PHOTO CAPTION :

