ದೆಹಲಿ : ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಐತಿಹಾಸಿಕ ಘಳಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ 13ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದಾರೆ.


80ನೇ ಸ್ವಾತಂತ್ರ್ಯ ದಿನಾಚರಣೆಯು ದೇಶಕ್ಕೆ ಒಂದು ಮೈಲಿಗಲ್ಲು. ಪ್ರಧಾನಿ ಮೋದಿ ಅವರು 2014 ರಿಂದ ಅವಿರತವಾಗಿ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದು, 13ನೇ ಬಾರಿ ಧ್ವಜಾರೋಹಣ ಮಾಡುವ ಮೂಲಕ ಜವಾಹರಲಾಲ್ ನೆಹರು (17 ಬಾರಿ) ಅವರ ದಾಖಲೆಯನ್ನು ಸಮೀಪಿಸಿದ್ದಾರೆ. ನೆಹರು ನಂತರ ಅತಿ ಹೆಚ್ಚು ಬಾರಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಮೂಲಕ ಮತ್ತು ‘ವಿಕಸಿತ ಭಾರತ’ದ ಗುರಿಯತ್ತ ರಾಷ್ಟ್ರವನ್ನು ಮುನ್ನಡೆಸುವ ಪ್ರತಿಜ್ಞೆಯೊಂದಿಗೆ ಈ ವರ್ಷದ ಆಚರಣೆ ವಿಶೇಷವಾಗಿತ್ತು

ಅದ್ದೂರಿ ಕಾರ್ಯಕ್ರಮಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಮೊದಲು ರಾಜ್ ಘಾಟ್ ಗೆ ತೆರಳಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಸ್ವಾತಂತ್ರ್ಯದ ಹಾದಿಯಲ್ಲಿ ಗಾಂಧೀಜಿಯವರ ತ್ಯಾಗ ಮತ್ತು ಸತ್ಯಾಗ್ರಹದ ಪಾಠವನ್ನು ಸ್ಮರಿಸಿದ ಅವರು, ಅವರ ಆದರ್ಶಗಳನ್ನು ನೆನಪಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಶಾಂತಿಪೂರ್ಣ ಚಾಲನೆ ನೀಡಿದರು. ರಾಜ್ ಘಾಟ್ನಿಂದ ನೇರವಾಗಿ ಕೆಂಪುಕೋಟೆಗೆ ತೆರಳಿದ ಪ್ರಧಾನಿಯವರಿಗೆ ಅಲ್ಲಿ ಭಾರತೀಯ ಸೇನೆಯು ಭವ್ಯವಾದ ಸ್ವಾಗತ ನೀಡಿತು.


ಕೆಂಪುಕೋಟೆಯ ಪ್ರವೇಶ ದ್ವಾರದಲ್ಲಿ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಮತ್ತು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರು ಬರಮಾಡಿಕೊಂಡರು. ಜೊತೆಗೆ, ದೆಹಲಿ ಪ್ರದೇಶದ ಕಮಾಂಡಿಂಗ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ರಾಜೇಶ್ ಸೇಥಿ ಅವರನ್ನು ಪ್ರಧಾನಿಗೆ ಪರಿಚಯಿಸಲಾಯಿತು. ಗೌರವ ರಕ್ಷೆಯನ್ನು ಸ್ವೀಕರಿಸಿದ ಬಳಿಕ, ರಾಷ್ಟ್ರಗೀತೆಯ ಮಧುರ ನಾದದೊಂದಿಗೆ ಪ್ರಧಾನಿ ಮೋದಿ ಅವರು 13ನೇ ಬಾರಿಗೆ ರಾಷ್ಟ್ರಧ್ವಜವನ್ನು ಹರಿಸಿದರು. ಈ ವೇಳೆ 1721 ನೇ ಫೀಲ್ಡ್ ಬ್ಯಾಟರಿಯ ಗನ್ನರ್ಗಳು 21-ಗನ್ ಸೆಲ್ಯೂಟ್ ನೀಡುವ ಮೂಲಕ ಕ್ಷಣದ ಗಾಂಭೀರ್ಯವನ್ನು ಹೆಚ್ಚಿಸಿದರು. ಮೇಜರ್ ಪವನ್ ಸಿಂಗ್ ಶೇಖಾವತ್ ನೇತೃತ್ವದಲ್ಲಿ ನಡೆದ ಈ ವಿಧ್ಯುಕ್ತ ಬ್ಯಾಟರಿಯಲ್ಲಿ ನೈಬ್ ಸುಬೇದಾರ್ ಅನುತೋಷ್ ಸರ್ಕಾರ್ ಗನ್ ಪೊಸಿಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದರು.




ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ‘ವಿಕಸಿತ ಭಾರತ’ದ ದೂರದೃಷ್ಟಿ, ಯುವ ಸಬಲೀಕರಣ, ಮಹಿಳಾ ನೇತೃತ್ವದ ಅಭಿವೃದ್ಧಿ, ಮತ್ತು ಸುಧಾರಿತ ಮೂಲಸೌಕರ್ಯಗಳ ಕುರಿತು ವಿವರಿಸಿದರು. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ತಮ್ಮ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು. ಅಲ್ಲದೆ, ಏಕಭಾರತ, ಶ್ರೇಷ್ಠ ಭಾರತದ ಕನಸನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಕರೆ ನೀಡಿದರು.

