ಕಾಸರಗೋಡು: ಮೈಸೂರಿನ ಪ್ರತಿಷ್ಠಿತ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ನೀಡಲಾಗುವ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ 2026ಕ್ಕೆ ಗಡಿನಾಡು ಕಾಸರಗೋಡಿನ ಕನ್ನಡ ಭವನದ ಸ್ಥಾಪಕ ಡಾ.ವಾಮನ್ ರಾವ್ ಬೇಕಲ್ ಅವರು ಭಾಜನರಾಗಿದ್ದಾರೆ.
ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಹಾಗೂ ‘ಚುಟುಕು ಬ್ರಹ್ಮ’ ಖ್ಯಾತಿಯ ಡಾ.ಎಂ.ಜಿ.ಆರ್.ಅರಸ್ ಅಧ್ಯಕ್ಷತೆಯ ಅನ್ವೇಷಣಾ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭವನದ ಮೂಲಕ ನಿರಂತರ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಕನ್ನಡದ ಸೇವೆಯನ್ನು ವಿಸ್ತರಿಸಿರುವ ಡಾ.ವಾಮನ್ ರಾವ್ ಬೇಕಲ್ ಅವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಕನ್ನಡ ಪ್ರೇಮಿಗಳಿಗೆ ಉಚಿತ ವಸತಿ ವ್ಯವಸ್ಥೆ, ಗ್ರಂಥಾಲಯ ಹಾಗೂ ಉಚಿತ ವಾಚನಾಲಯದ ಸೌಲಭ್ಯ ಕಲ್ಪಿಸಿರುವುದು, ಅಶಕ್ತ ಲೇಖಕರ ಬರಹಗಳನ್ನು ಕೃತಿಗಳಾಗಿ ಪ್ರಕಟಿಸಿ ಕವಿ-ಸಾಹಿತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಭವನ ಪ್ರಕಾಶನದ ಮೂಲಕ ಸೇವೆ ಸಲ್ಲಿಸುತ್ತಿರುವುದು ಪ್ರಶಸ್ತಿಗೆ ಪರಿಗಣಿಸಲಾದ ಪ್ರಮುಖ ಅಂಶಗಳಾಗಿವೆ.
ಅಲ್ಲದೆ ವಿವಿಧ ಪ್ರಕಾರಗಳ ಕನ್ನಡ ಸಮ್ಮೇಳನಗಳು ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಸಾವಿರಾರು ಗಣ್ಯರನ್ನು ಕಾಸರಗೋಡಿನ ಕನ್ನಡ ಭವನಕ್ಕೆ ಆಹ್ವಾನಿಸಿ ಆತಿಥ್ಯ ಹಾಗೂ ಗೌರವಾರ್ಪಣೆ ಸಲ್ಲಿಸುತ್ತಿರುವ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಡಾ.ವಾಮನ್ ರಾವ್ ಬೇಕಲ್, “ಈ ಗೌರವ ನನಗೆ ಮಾತ್ರವಲ್ಲ, ಗಡಿನಾಡು ಕಾಸರಗೋಡಿಗೆ ಸಂದ ಗೌರವವಾಗಿದೆ” ಎಂದು ಹೇಳಿದರು

