ಮಂಗಳೂರು: ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಆಡಳಿತದಲ್ಲಿ ಪಾರದರ್ಶಕತೆ ಇಲ್ಲದೆ, ಹಣಕಾಸಿನ ಅವ್ಯವಹಾರ ನಡೆದಿದೆ ಈ ಕುರಿತು ಸಹಕಾರಿ ನಿಬಂಧಕರಿಗೆ ದೂರು ನೀಡಲಾಗಿದೆ ಎಂದು ಕಾರ್ಯಾಕಾರಿ ಸಮಿತಿ ಸದಸ್ಯ ಪವನ್ ರಾಜ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದರು.
ಕಳೆದ ಎರಡು ವರ್ಷಗಳಿಂದ ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಿಂದಿನ ಮಹಾಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಸುರೇಶ್ ಭಟ್ ನಗರ ಹಾಗೂ ಸಂಘದ ಅಧ್ಯಕ್ಷರಾಗಿ ಉಮೇಶ್ ಬೆಂಜನಪದವು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಆದರೆ ಅಧಿಕಾರ ಹಸ್ತಾಂತರಗೊಂಡ ಸುಮಾರು 15 ದಿನಗಳಲ್ಲೇ ಉಮೇಶ್ ಬೆಂಜನಪದವು ಅವರು ವೈಯಕ್ತಿಕ ಕಾರಣ ನೀಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಅದಾದ ಬಳಿಕ ಹೊಸ ಮಹಾಸಭೆಯನ್ನು ಕರೆಯದೆ, ಹಲವು ಆಕ್ಷೇಪಗಳ ನಡುವೆಯೇ ಮಾಸಿಕ ಸಭೆಯಲ್ಲಿ ಚಿದಾನಂದ ಗುರಿಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇಲ್ಲಿಂದ ಮುಂದಿನ ಆಡಳಿತ ಕ್ರಮಗಳ ಕುರಿತು ಕಾರ್ಯಕಾರಿ ಸಮಿತಿಯೊಳಗೆ ಹಲವು ಪ್ರಶ್ನೆಗಳು ಉದ್ಬವಿಸುತ್ತಾ ಬಂದಿವೆ. ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ಅವರ ಅವಧಿಯಲ್ಲಿ ನೂತನ ಸಭಾಂಗಣ ನಿರ್ಮಾಣದ ವೇಳೆ ಹಣಕಾಸಿನ ಕೊರತೆ ಉಂಟಾದಾಗ ತಮ್ಮ ಕುಟುಂಬದ ಜಮೀನು ಅಡಮಾನವಿಟ್ಟು ಸುಮಾರು ₹30 ಲಕ್ಷ ಸಾಲ ಪಡೆಯಲಾಗಿತ್ತು. ಬ್ಯಾಂಕ್ ಸಾಲ ಹಾಗೂ ಇತರ ಬಾಕಿ ಸೇರಿ ಸುಮಾರು ₹36 ಲಕ್ಷ ಬಾಧ್ಯತೆ ಇದೆ ಎಂದು ಸಭೆಯಲ್ಲಿ ತಿಳಿಸಲಾಗಿತ್ತು, ಅಲ್ಲದೆ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಚಂದ್ರಹಾಸ್ ಉಳ್ಳಾಲ್ ಅವರು ಸಾಧ್ಯವಾದಷ್ಟು ಬೇಗ ಸಾಲವನ್ನು ತೀರಿಸಿ ಅಡಮಾನದಲ್ಲಿರುವ ದಾಖಲೆಗಳನ್ನು ಹಿಂದಿರುಗಿಸುವಂತೆ ಮನವಿ ಮಾಡಿಕೊಂಡಿದ್ದರು ಆದರೂ ಈವರೆಗೆ ಸಮರ್ಪಕ ಲೆಕ್ಕಪತ್ರ ಮಂಡನೆಯಾಗಿಲ್ಲ ಎಂದು ಪವನ್ ರಾಜ್ ಹೇಳಿದರು.
ನಮ್ಮ ಕ್ಷೇತ್ರದಲ್ಲಿ ದಾನಿಗಳ ಸಹಕಾರದಿಂದ ಮಹಾದ್ವಾರ ನಿರ್ಮಾಣವಾಗಿದೆ. ಆದರೆ ಆ ದ್ವಾರದ ನಕ್ಷೆ, ಆ ದ್ವಾರ ನಿರ್ಮಾಣದ ಗುತ್ತಿಗೆ ಹೇಗೆ ಕೊಡುವುದು, ಯಾವ ಗೊತ್ತಿಗೆದಾರರಿಗೆ ಕೊಡುವುದು, ಯಾವ ರೀತಿಯಲ್ಲಿ ನಿರ್ಮಾಣ ಮಾಡ್ತಾರೆ, ಈ ಕುರಿತು ಯಾವುದೇ ಒಂದು ಚರ್ಚೆ ನಡೆದಿಲ್ಲ. ನಮಗೆ ಯಾವುದೇ ಸಂಘರ್ಷ ಮಾಡಲು ಮನಸ್ಸಿಲ್ಲ, ನಮ್ಮದೇ ಸಂಘ, ನಮ್ಮದೇ ಸಮಾಜ, ಯಾವುದೇ ಭಿನ್ನಾಭಿಪ್ರಾಯವಿಲ್ಲ ಆದರೆ ಪಾರದರ್ಶಕವಾಗಿ ಸಂಘದ ಬೈಲಾ ಪ್ರಕಾರ ನಡೆಯಬೇಕು, ಲೆಕ್ಕಪತ್ರಗಳು ಪಾರದರ್ಶಕವಾಗಿ ಇರಬೇಕು ಕಾರ್ಯಕಾರಿಣಿ ಸಮಿತಿಗೆ ಹಕ್ಕು ಮತ್ತು ಜವಾಬ್ದಾರಿಗಳು ಇರಬೇಕು ಇದೇ ನಮ್ಮ ಆಗ್ರಹ, ಆದರೆ ಲೆಕ್ಕಪತ್ರ ಕುರಿತು ಪ್ರಶ್ನೆ ಮಾಡಿದರೆ ಫೋನ್ ನಲ್ಲಿ ಬೆದರಿಕೆ ಹಾಕಲಾಗುತ್ತದೆ. ಕೈಕಾಲು ಕಡಿಯುವುದಾಗಿ ಹೇಳುತ್ತಾರೆ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ದೂರು ಕೊಟ್ಟರೂ ಎಲ್ಲಾ ದಾಖಲೆಗಳನ್ನು ನೀಡಲಾಗಿದ್ದರೂ ಆತನ ವಿರುದ್ಧ ಎಫ್ ಐಆರ್ ದಾಖಲಾಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವದಾಸ್ ಕೊಲ್ಯ ಉಪಸ್ಥಿತರಿದ್ದರು

