ಮಂಗಳೂರು :ಜನ್ಮಭೂಮಿ ಫೌಂಡೇಶನ್ (ರಿ.), ಮಂಗಳೂರು ಹಾಗೂ ಜನ್ಮಭೂಮಿ ಸಂಸ್ಕಾರ ಕೇಂದ್ರ, ಮರೋಳಿ ವತಿಯಿಂದ ಮರೋಳಿ ಶ್ರೀ ಸೂರ್ಯನಾರಾಯಣ ದೇವರ ಸನ್ನಿಧಿಯಲ್ಲಿ ಜನ್ಮಭೂಮಿ ಸಂಸ್ಕಾರ ಕೇಂದ್ರದ 9ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಸೆಪ್ಟೆಂಬರ್ 4ರಂದು ಶುಕ್ರವಾರ ಸಂಜೆ 5.30ಕ್ಕೆ ಆಯೋಜಿಸಲಾಗಿದೆ ಎಂದು ಮರೋಳಿ ಶ್ರೀ ಸೂರ್ಯನಾರಾಯಣ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಶೆಟ್ಟಿ ಜೆಪ್ಪುಗುಡ್ಡೆಗುತ್ತು ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕೃಷ್ಣ ವೇಷ ಸ್ಪರ್ಧೆಯಲ್ಲಿ 500ಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಎಲ್ಲರಿಗೂ ಪ್ರೋತ್ಸಾಹ ಬಹುಮಾನ ನೀಡಲಾಗುವುದು ಎಂದರು.

ಈ ಬಾರಿ ‘ನಂದಗೋಕುಲದತ್ತ ಮುದ್ದು ರಾಧಾಕೃಷ್ಣರ ಹೆಜ್ಜೆ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸಂಸ್ಕಾರ ಕೇಂದ್ರದ ಸದಸ್ಯರು ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಕೃಷ್ಣೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೊದಲ ಸುತ್ತಿನಲ್ಲಿ ನೃತ್ಯ-ಭಜನಾ ಪ್ರದಕ್ಷಿಣೆ, ಎರಡನೇ ಸುತ್ತಿನಲ್ಲಿ ಯಕ್ಷಗಾನ ಪ್ರದಕ್ಷಿಣೆ ಹಾಗೂ ಮೂರನೇ ಸುತ್ತಿನಲ್ಲಿ ಕೋಲಾಟ ಪ್ರದಕ್ಷಿಣೆ ನಡೆಯಲಿದೆ. ಬಳಿಕ ದೇವರ ಮುಂಭಾಗದಲ್ಲಿ ರಾಧಾ-ಕೃಷ್ಣ ವೇಷಧಾರಿ ಮಕ್ಕಳು ಹಾಗೂ ಪೋಷಕರೊಂದಿಗೆ ಕೃಷ್ಣ ನೃತ್ಯೋತ್ಸವ ಆಯೋಜಿಸಲಾಗಿದೆ.
ತಾಯಂದಿರು ತಮ್ಮ ಮಕ್ಕಳೊಂದಿಗೆ ಯಶೋಧೆ ವೇಷಧಾರಿಯಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸೆಪ್ಟೆಂಬರ್ 1ರೊಳಗೆ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಸಂಸದ ಹಾಗೂ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಬೆಂಗಳೂರು ಅವರು ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ. ಹಾಗೂ ಕೆಪಿಸಿಸಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಮಿಥುನ್ ರೈ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಗಿರಿಧರ್ ಶೆಟ್ಟಿ, ಕೃಷ್ಣ ಎಸ್.ಆರ್. ಮರೋಳಿ, ರಂಜಿತ್ ಮರೋಳಿ, ಜಗದೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

