ಮಂಗಳೂರು: ಇಸ್ಕಾನ್ ಮಂಗಳೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ 2026 ಅನ್ನು ಸೆಪ್ಟೆಂಬರ್ 3 ಮತ್ತು 4ರಂದು ಪಿಲಿಕುಳದ ಸೌಟ್ಸ್ ಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮಂಗಳೂರಿನ ಇಸ್ಕಾನ್ ಪಿವಿಎಸ್ ಕಲಾಕುಂಜ್ನ ಶ್ರೀಕೃಷ್ಣ ಬಲರಾಮ ಮಂದಿರದ ಅಧ್ಯಕ್ಷ ಗುಣಾಕರ ರಾಮ ದಾಸ ತಿಳಿಸಿದ್ದಾರೆ.
ಇಸ್ಕಾನ್ ಪಿವಿಎಸ್ ಕಲಾಕುಂಜ್ನ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಯುವಜನ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಮಹೋತ್ಸವದ ಅಂಗವಾಗಿ ಆಳ್ವಾಸ್ ವತಿಯಿಂದ ‘ಶ್ರೀಕೃಷ್ಣ ವೈಭವಂ’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾರತದ ಶ್ರೀಮಂತ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಲಾಗುವುದು. ಭಕ್ತಿಮಯ ಸಂಗೀತ, ಜಪ ಹಾಗೂ ಸಂಭ್ರಮದ ವಾತಾವರಣ ಸೃಷ್ಟಿಸುವ ಅಂತರರಾಷ್ಟ್ರೀಯ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮವೂ ನಡೆಯಲಿದೆ.

ಇದಲ್ಲದೆ, ಮಂಗಳೂರಿನ 20ಕ್ಕೂ ಅಧಿಕ ಜನಪ್ರಿಯ ಬ್ರಾಂಡ್ ಭಾಗವಹಿಸುವಿಕೆಯಲ್ಲಿ ‘ಕೃಷ್ಣ ರಸ ಬಜಾರ್’ ಆಹಾರೋತ್ಸವ, ಕೃಷ್ಣನಿಗಾಗಿ ಬ್ಲಾಗ್, 2,000ಕ್ಕೂ ಅಧಿಕ ಯುವಜನರು ಭಾಗವಹಿಸುವ ಮಂಗಳೂರು ಯುವ ಉತ್ಸವ ಹಾಗೂ ಎಲ್ಲಾ ವಯೋಮಾನದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 4ರಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯುವ ಭವ್ಯ ಶ್ರೀಕೃಷ್ಣ ಬಲರಾಮ ಮಹಾಭಿಷೇಕದೊಂದಿಗೆ ಜನ್ಮಾಷ್ಟಮಿ ಆಚರಣೆಗೆ ತೆರೆ ಬೀಳಲಿದೆ. ಭಕ್ತರು ಹಾಗೂ ಸಾರ್ವಜನಿಕರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.
ಭಕ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಸ್ಕಾನ್ ಪಿವಿಎಸ್ ಕಲಾಕುಂಜ್ನಿಂದ ಪಿಲಿಕುಳದ ಸೌಟ್ಸ್ ಭವನಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು, ಕುಟುಂಬಸ್ಥರು, ಯುವಜನತೆ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಂದರ ಗೌರ ದಾಸ ಹಾಗೂ ನಂದನಾಚಾರ್ಯ ದಾಸ ಉಪಸ್ಥಿತರಿದ್ದರು.

