ಮಂಗಳೂರು: ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ನೆರವಾಗುವ ಉದ್ದೇಶದಿಂದ ವಲ್ಕನ್ ಲರ್ನಿಂಗ್ ಕಲೆಕ್ಟಿವ್ ಎಲ್ಎಲ್ಪಿ ಸಂಸ್ಥೆ ‘ವಲ್ಕನ್ ಜಿಜ್ಞಾಸಾ ಎಂಬ ಪರೀಕ್ಷಾ ಸಾಫ್ಟ್ವೇರ್ ಅನ್ನು ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾತ್ವಿಕ್ ಕೆ.ಜೆ. ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.8ರಂದು ಸಂಜೆ 5.30ಕ್ಕೆ ಎ.ಜೆ. ಗ್ರಾಂಡ್ನಲ್ಲಿ ಸಾಫ್ಟ್ವೇರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ. ಟೈ ಮಂಗಳೂರು ಅಧ್ಯಕ್ಷ ಶ್ಯಾಮ್ ಪ್ರಸಾದ್ ಹೆಬ್ಬಾರ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮೂಡುಬಿದಿರೆ ಸಮೀಪದ ಮಿಜಾರಿನಲ್ಲಿ ಕಚೇರಿ ಹೊಂದಿರುವ ಸಂಸ್ಥೆ, ಕಳೆದ ಏಳು ತಿಂಗಳಲ್ಲಿ ‘ವಲ್ಕನ್ ಪ್ರೆಪ್’ ಸಂದರ್ಶನ ಸಾಫ್ಟ್ವೇರ್ ಮೂಲಕ ದೇಶಾದ್ಯಂತ ಸುಮಾರು 12 ಸಾವಿರ ವಿದ್ಯಾರ್ಥಿಗಳನ್ನು ತಲುಪಿದೆ. ಇದೀಗ ಬೋಟ್ಸ್ವಾನಾದಲ್ಲಿಯೂ ಸಾಫ್ಟ್ವೇರ್ ಬಳಕೆ ಆರಂಭವಾಗಿದ್ದು, ದಕ್ಷಿಣ ಕನ್ನಡದಿಂದ ಜಾಗತಿಕ ಮಟ್ಟಕ್ಕೆ ತಂತ್ರಜ್ಞಾನ ತಲುಪುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಾತ್ವಿಕ್ ಹೇಳಿದರು.
‘ವಲ್ಕನ್ ಜಿಜ್ಞಾಸಾ’ ಬಿಡುಗಡೆ ಕಾರ್ಯಕ್ರಮ ಕೇವಲ ಉತ್ಪನ್ನ ಬಿಡುಗಡೆ ಕಾರ್ಯಕ್ರಮವಲ್ಲ, ದಕ್ಷಿಣ ಕನ್ನಡ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವೂ ಆಗಿದೆ. ಹೊರಗಿನಿಂದ ಬಂದವರಿಗೂ ಈ ಜಿಲ್ಲೆ ಅವಕಾಶಗಳನ್ನು ನೀಡುತ್ತದೆ ಎಂಬುದಕ್ಕೆ ನಮ್ಮ ಸಂಸ್ಥೆಯ ಬೆಳವಣಿಗೆಯೇ ಉದಾಹರಣೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ದೀಪಾ ಪ್ರಭು ಹಾಗೂ ಖ್ಯಾತಿ ಕಾಮತ್ ಉಪಸ್ಥಿತರಿದ್ದರು.

