ಮಂಗಳೂರು: ಶರಧಿ ಪ್ರತಿಷ್ಠಾನ (ರಿ.) ಹಾಗೂ ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆವೆ ಮಣ್ಣಿನ ಗಣಪತಿ ಮೂರ್ತಿ ರಚನಾ ಸ್ಪರ್ಧೆ ಸೆ.13ರಂದು ಸಂಜೆ 3.30ರಿಂದ 6.30ರವರೆಗೆ ಲಾಲ್ಬಾಗ್ನ ಸೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ ಎಂದು ಕರಾವಳಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲತೆ, ಕಲಾ ಆಸಕ್ತಿ ಹಾಗೂ ಪರಿಸರ ಕಾಳಜಿ ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆಯನ್ನು ತೊರೆದು ಆವೆ ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ಎಂಬ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಮೂರ್ತಿ ರಚನೆಗೆ 1 ಗಂಟೆ 30 ನಿಮಿಷಗಳ ಕಾಲಾವಕಾಶವಿದ್ದು, ಆವೆ ಮಣ್ಣನ್ನು ಆಯೋಜಕರೇ ಒದಗಿಸಲಿದ್ದಾರೆ.
ಸ್ಪರ್ಧೆಗೆ ನೋಂದಣಿಗೆ ಸೆ.11 ಕೊನೆಯ ದಿನವಾಗಿದ್ದು, ಆಸಕ್ತರು 99167 77241ಕ್ಕೆ ವಾಟ್ಸಾಪ್ ಮೂಲಕ ಹೆಸರು ನೋಂದಾಯಿಸಬಹುದು. ಇದೇ ಸಂದರ್ಭದಲ್ಲಿ ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರಿಂದ ಚಿತ್ರಕಲಾ ಪ್ರದರ್ಶನವೂ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶರಧಿ ಪ್ರತಿಷ್ಠಾನದ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಾರ್ಯದರ್ಶಿ ಪುನೀಕ್ ಶೆಟ್ಟಿ, ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ ಹಾಗೂ ಕಾರ್ಯದರ್ಶಿ ಡಾ.ಜಯಪ್ರಕಾಶ್ ಬಿ. ಉಪಸ್ಥಿತರಿದ್ದರು

