ಮಂಗಳೂರು : ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ, ಜನರ ಮನಸ್ಸುಗಳನ್ನು ಕಟ್ಟುವ, ಜೊತೆಗೆ ಪರಸ್ಪರ ಭಾಂದವ್ಯದ ಬೆಸುಗೆ ಹಾಕುವ ಸದುದ್ದೇಶದಿಂದ ದ.ಕ ಜಿಲ್ಲಾ ಸಹಮತ ವೇದಿಕೆ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ರ ತನಕ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ.ಕ ಜಿಲ್ಲಾ ಬಸವ ಸಂಸ್ಕ್ರತಿಕ ಅಭಿಯಾನದ ಸಂಚಾಲಕ ಉಮರ್ ಯು.ಹೆಚ್ ಹೇಳಿದರು.

ವ್ಯಸನ ಮುಕ್ತ ಸಮ ಸಮಾಜದ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ವಿದ್ಯಾರ್ಥಿ ಯುವಜನರಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತೆ ಕಾಪಾಡುವುದು ಮತ್ತು ವ್ಯಕ್ತಿತ್ವ ವಿಕಸನ ಇವು ಅಭಿಯಾನದ ಮೂಲ ಆಶಯ.ಇದರ ಭಾಗವಾಗಿ ದ.ಕ. ಜಿಲ್ಲಾ ಸಹಮತ ವೇದಿಕೆಯ ಆಶ್ರಯದಲ್ಲಿ ಸೆಪ್ಟೆಂಬರ್ 19ರಂದು ಮಂಗಳೂರಿನ ಉರ್ವಸ್ಟೋರ್ ಬಳಿಯ ತುಳು ಭವನದಲ್ಲಿ ಅಭಿಯಾನದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10.00ಕ್ಕೆ ಪೂಜ್ಯ ಸ್ವಾಮೀಜಿಗಳ ಸಾರಥ್ಯದಲ್ಲಿ, ವಿದ್ಯಾರ್ಥಿ ಯುವಜನರನ್ನು ಕೇಂದ್ರೀಕರಿಸಿ ‘ಬಸವಾದಿ ಶಿವಶರಣರ ವಚನ ಸಂದೇಶ’ ಎಂಬ ವಿಷಯದಲ್ಲಿ ಸಂವಾದ ನಡೆಯಲಿದೆ. ಮಧ್ಯಾಹ್ನ 3.00 ರಿಂದ ಲೇಡಿಹಿಲ್ ಬಳಿಯ ಶ್ರೀ ನಾರಾಯಣ ಗುರು ವೃತ್ತದಿಂದ ತುಳು ಭವನದ ತನಕ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವರ್ಣರಂಜಿತ ಪಾದಯಾತ್ರೆ ನಡೆಯಲಿದ್ದು, ಸಂಜೆ 4.30ಕ್ಕೆ ತುಳು ಭವನದಲ್ಲಿ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ. ಮತ್ತು ಸಂಜೆ 6.30ಕ್ಕೆ ವಚನ ಸಂಗೀತ ಮತ್ತು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ ಶಿವಸಂಚಾರ ಸಾಣೇಹಳ್ಳಿ ತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ನಡೆಯಲಿದೆ.

ಬಾಲ್ಕಿ, ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು, ಕೂಡಲಸಂಗಮ ಬಸವ ಧರ್ಮಪೀಠದ ಡಾ. ಗಂಗಾ ಮಾತಾಜಿ, ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿ, ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮೂಡುಬಿದರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ, ಮೈಸೂರಿನ ಶ್ರೀ ಉರಿಲಿಂಗ ಪೆದ್ದಿಗಳ ಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ವೈ. ಎಸ್. ವಿ. ದತ್ತ, ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ವಂದನೀಯ ಧರ್ಮಗುರು ವಿಶಾಲ್ ಮೋನಿಸ್, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಗಳ್ ಮದನಿ ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಬಸವಣ್ಣ: ಒರು ಹಯಾಲ್’ ಬ್ಯಾರಿ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಬಿಡುಗಡೆ ಮಾಡಲಿದ್ದು, ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ದ.ಕ. ಜಿಲ್ಲಾ ಮಟ್ಟದ ಸಮೂಹ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ. ಎಸ್. ಜಯಪ್ಪ (ಅಧ್ಯಕ್ಷ, ಸಹಮತ ವೇದಿಕೆ, ದ.ಕ. ಜಿಲ್ಲೆ) ಸಂತೋಷ್ ಡಿ’ಸೋಜ (ಅಧ್ಯಕ್ಷ, ಮಂಗಳೂರು ಪ್ರದೇಶ ಕಥೊಲಿಕ್ ಸಭಾ)
ಡೆನಿಸ್ ಡಿ’ಸಿಲ್ವಾ (ಅಧ್ಯಕ್ಷ, ಆಮಿ ಆನಿ ಆಮ್ಮಿಂ, ಮಂಗಳೂರು) ಮೀನಾಕ್ಷಿ ರಾಮಚಂದ್ರ (ವಿಶ್ರಾಂತ ಪ್ರಾಧ್ಯಾಪಕರು, ಬೆಸೆಂಟ್ ಕಾಲೇಜು, ಮಂಗಳೂರು)
ಶಮೀಮಾ ಕುತ್ತಾರ್ (ಅಧ್ಯಕ್ಷೆ, ಮಹಿಳಾ ಘಟಕ, ಅಖಿಲ ಭಾರತ ಬ್ಯಾರಿ ಪರಿಷತ್, ಮಹೇಶ್ ನಾಯಕ್,ವಿಲ್ಮಾ ಮೊಂತೆರೋ ಉಪಸ್ಥಿತರಿದ್ದರು.


