ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ (ರಿ) ಸಂಸ್ಥೆಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ” ವಿಹಂಗಮ “ಎಂಬ “ಕರ್ನಾಟಕೀ ಮತ್ತು ಹಿಂದೂಸ್ತಾನೀ ಜುಗಲ್ ಬಂಧಿ ಕಾರ್ಯಕ್ರಮ ಅಕ್ಟೋಬರ್ 05 ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಹಂಗಮ’ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಇಬ್ಬರು ಕಲಾವಿದರಾದ ವಿದ್ವಾನ್ ಡಾ.ಮೈಸೂರು ಮಂಜುನಾಥ್ ಮತ್ತು ಉಸ್ತಾದ್ ರಫೀಕ್ ಖಾನ್ ಇವರಿಂದ ‘ವಯೋಲಿನ್-ಸಿತಾರ್ ಜುಗಲ್ ಬಂಧಿ’ ನಡೆಯಲಿದೆ ಅಲ್ಲದೆ ಮೃದಂಗದಲ್ಲಿ ಚೆನೈನ ವಿದ್ವಾನ್ ತಿರುವಾರೂರು ಭಕ್ತವತ್ಸಲಂ ಮತ್ತು ತಬ್ಲಾದಲ್ಲಿ ಮುಂಬೈನ ಶ್ರೀ ಓಜಸ್ ಅಧಿಯಾ ಅವರು ಸಾಥ್ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಮಂಗಳೂರು ನಗರದ ಪೋಲಿಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಅವರು ಚಾಲನೆ ನೀಡಲಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದು.ಬೆಂಗಳೂರಿನ ಸೆಂಚುರಿ ಗ್ರೂಪ್ ನ ಅಧ್ಯಕ್ಷರಾದ ಡಾ.ಪಿ.ದಯಾನಂದ ಪೈ ಸಹಪ್ರಾಯೋಜಕರಾಗಿ ಸಹಕರಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಗೀತಸಕ್ತರೆಲ್ಲರಿಗೂ ಉಚಿತ ಪ್ರವೇಶವಿದ್ದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಉಷಾಪ್ರಭಾ ನಾಯಕ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್,ಖಜಾಂಚಿ ಕರುಣಾಕರ ಬಳ್ಳೂರು,ಟ್ರಸ್ಟಿಗಳಾದ ಮುರಳೀಧರ್ ಜಿ.ಶೆಣೈ, ಡಾ.ರಮೇಶ್ ಕೆ ಜಿ,ಹಾಗೂ ಅಂಕುಶ್ ಎನ್ ನಾಯಕ್ ಉಪಸ್ಥಿತರಿದ್ದರು.

ಮೈಸೂರು ಮಂಜುನಾಥ್:
ಕರ್ನಾಟಕೀ ಸಂಗೀತ ಕ್ಷೇತ್ರದ ದಿಗ್ಗಜ ಡಾ.ಮೈಸೂರು ಮಂಜುನಾಥ್ ಅವರು, ಖ್ಯಾತ ವಯೋಲಿನ್ ವಿದ್ವಾಂಸರಾದ ವಿದ್ವಾನ್ ಎಸ್. ಮಹಾದೇವಪ್ಪ ಅವರ ಪುತ್ರ, ಬಾಲ್ಯದಲ್ಲೇ ಸಂಗೀತಾಭ್ಯಾಸ ಆರಂಭಿಸಿ, ಎಂಟು ವರ್ಷದ ವಯಸ್ಸಿನಲ್ಲೇ ಮೊದಲ ಕಚೇರಿ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಥಮ ಬ್ಯಾಂಕ್ ಹಾಗೂ ನಾಲ್ಕು ಗೋಲ್ಡ್ ಮೆಡಲ್ಗಳನ್ನು ಪಡೆದಿದ್ದಾರೆ. ಬಳಿಕ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ದೇಶ ವಿದೇಶಗಳಲ್ಲಿ ವಯೋಲಿನ ಕಾರ್ಯಕ್ರಮ ನೀಡಿ ವಿಶ್ವಖ್ಯಾತಿ ಪಡೆದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ವಿದ್ವಾನ್ ಮೈಸೂರು ಮಂಜುನಾಥ್ ಅವರು ನಮ್ಮ ದೇಶದ ಹೆಮ್ಮೆಯ ಕಲಾವಿದರು.
ಉಸ್ತಾದ್ ರಫೀಕ್ ಖಾನ್:
ಉಸ್ತಾದ್ ರಫೀಕ್ ಖಾನ್ ಅವರು ಧಾರವಾಡ ಘರಾಣೆಯ ಸಂಗೀತಗಾರರ ಆರನೆಯ ತಲೆಮಾರಿನವರು. ಇವರ ತಂದೆ, ದಿವಂಗತ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರು ಪ್ರಸಿದ್ಧ ಸಿತಾರ್ ವಾದಕರಾಗಿದ್ದರು.ಅಜ್ಜ ಉಸ್ತಾದ್ ರಹಿಮತ್ ಖಾನ್ ಅವರು “ಸಿತಾರ್ ರತ್ನ’ ಪುರಸ್ಕೃತರಾಗಿದ್ದರು.ಇವರು ಸಿತಾರ್ ವಾದ್ಯದಲ್ಲಿ ಖಾರ್ಜ್ ಸಪ್ತಕವನ್ನು ಸೇರಿಸಿದವರು. ಈ ಮೂಲಕ ಮೂರು ತಂತಿಯ ಸಿತಾರ್ ಅನ್ನು ಏಳು ತಂತಿಯಾಗಿ ಪರಿವರ್ತನೆ ಮಾಡಿದ ಸಂಗೀತ ಮಾಂತ್ರಿಕ ರಫೀಕ್ ಖಾನ್ ಅವರು ಧಾರವಾಡದಲ್ಲಿ ಜನಿಸಿದರು. ಮತ್ತು ಒಂಬತ್ತನೇ ವಯಸ್ಸಿನಲ್ಲಿ ಸಿತಾರ್ ನುಡಿಸಲು ಪ್ರಾರಂಭಿಸಿದರು.ಆಲ್ ಇಂಡಿಯಾ ರೇಡಿಯೋದಲ್ಲಿ ಉನ್ನತ ಶ್ರೇಣಿಯ ಕಲಾವಿದರಾದ ಇವರು ಭಾರತ ಮತ್ತು ವಿದೇಶಗಳಲ್ಲಿ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಸಿತಾರ್ ಕಾರ್ಯಕ್ರಮ ಪ್ರದರ್ಶನ ನೀಡಿದ್ದಾರೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಸದಸ್ಯರಾಗಿದ್ದಾರೆ.

