ಮಂಗಳೂರು: ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಒಟ್ಟು 800 ವರ್ಷಗಳ ಇತಿಹಾಸವಿದೆ. ಸಂಪ್ರದಾಯ ಬಿಡದೇ ಆಧುನಿಕತೆಯೊಂದಿಗೆ ಅರಸು ಕಂಬಳ ನಡೆಸಲಾಗುತ್ತಿದೆ. ಮುಲ್ಕಿ ಅರಸು ಕಂಬಳದ ಬಗ್ಗೆ ಪುಸ್ತಕ ಹೊರ ತಂದಿರುವುದು ಶ್ಲಾಘನೀಯ ಎಂದು ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಗೌರವ ಸಂಪಾದಕತ್ವದ ‘ಮೂಲ್ಕಿ ಸೀಮೆ ಅರಸು ಕಂಬುಲ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಅರಮನೆ, ಬೀಡು ಇದ್ದ ಎಲ್ಲ ಕಡೆ ಕಂಬಳ ನಡೆಯುತ್ತಿತ್ತು. 1971ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೊಳ್ಳುವವರೆಗೆ ಈ ಕಂಬಳಗಳು ನಡೆಯುತ್ತಿದ್ದವು. ಪ್ರಸ್ತುತ ಅಳದಂಗಡಿ, ಮುಲ್ಕಿ ಅರಮನೆಯಲ್ಲಿ ಕಂಬಳ ನಡೆಯುತ್ತಿದೆ ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಾರ್ನಾಡು ಶ್ರೀ ಹರಿಹರ ದೇವಸ್ಥಾನದ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ, ಅರಸು ಕಂಬಳ ಹಿಂದೆ ನಡೆಯುತ್ತಿದ್ದಂತೆ ವಿಜೃಂಭಣೆಯಿಂದ ನಡೆಯಬೇಕು.ದಿನಾಂಕ ಸಹಿತ ಈ ಬಗ್ಗೆ ಯಾವುದೇ ಗೊಂದಲ ಇರಬಾರದು ಎಂದರು.

ಪುಸ್ತಕದ ಬಗ್ಗೆ ಮಾತನಾಡಿದ ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮೂಲ್ಕಿ ಸೀಮೆ ಅರಸು ಕಂಬುಲ ಪುಸ್ತಕದ ಮೂಲಕ ಮುಲ್ಕಿ ಅರಸು ಕಂಬಳದ ದಾಖಲೀಕರಣ ಆಗಿದೆ. ಕಳೆದ ಹಲವಾರು ವರ್ಷಗಳ ಕಂಬಳದ ಸಭೆಗಳು, ಕಂಬಳದ ದಾನಿಗಳ ಬಗ್ಗೆ , ಸಂಕಷ್ಟದ ಬಗ್ಗೆ ದಾಖಲೀಕರಣ ಇದೆ. ಕಂಬಳದ ಆಚರಣೆಗಳ ಬಗ್ಗೆ ಪುಸ್ತಕದ ದಾಖಲೆ ಒದಗಿಸಲಾಗಿದೆ. ಮುಂದಿನ ತಲೆಮಾರುಗಳ ವಿದ್ಯಾರ್ಥಿಗಳಿಗೆ ಪಠ್ಯವಾಗುವ ಅರ್ಹತೆ ಈ ಪುಸ್ತಕಕ್ಕಿದೆ. ತುಳುನಾಡಿನಲ್ಲಿ ಕಂಬಳ ಸಾಮರಸ್ಯಕ್ಕೂ ಕಾರಣವಾಗಿದೆ ಎಂದು ಹೇಳಿದರು.
ಪುಸ್ತಕ ಹೊರತರು ಸಹಕಾರ ನೀಡಿದವರನ್ನು ಈ ವೇಳೆ ಗೌರವಿಸಲಾಯಿತು.ಪುಸ್ತಕದ ಗೌರವ ಸಂಪಾದಕ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಸ್ವಾಗತಿಸಿದರು. ಪ್ರಧಾನ ಸಂಪಾದಕಿ ಡಾ. ಸಾಯಿಗೀತಾ ಹೆಗ್ಡೆ ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

