ಧಾರವಾಡ: ಶ್ರೇಷ್ಠ ಅವಧೂತರಾಗಿದ್ದ ತ್ರಿಕಾಲ ಜ್ಞಾನಿ ಗರಗದ ಶ್ರೀ ಮಡಿವಾಳ ಶಿವಯೋಗಿಗಳು ಶ್ರೀ ವೀರಭದ್ರ ದೇವರ ಅವತಾರವಾಗಿದ್ದಾರೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ತಾಲೂಕಿನ ಗರಗದ ಶ್ರೀ ಮಡಿವಾಳಜ್ಜನವರ ಮಠದಲ್ಲಿ ನಡೆದ ಚಿಕ್ಕೋಡಿ ತಾಲೂಕು ಯಡೂರ ಕ್ಷೇತ್ರದ ಶ್ರೀ ವೀರಭದ್ರ ದೇವರ ಭಕ್ತರ ಸಂಘಟನಾ ಜನಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಸತ್ಯನಿಷ್ಠೆಯನ್ನು ಎತ್ತಿಹಿಡಿದು ಮಾನವನ ರಾಕ್ಷಸೀ ಗುಣಸ್ವಭಾವಗಳಿಗೆ ಕಡಿವಾಣ ಹಾಕಿರುವ ಒಂದು ಮಹಾಶಕ್ತಿ ಸಂಚಯ ವೀರಭದ್ರ ದೇವರಲ್ಲಿ ಸಂಗಮಿಸಿದೆ. ಇಂತಹ ಮಹಾಶಕ್ತಿಯ ವೀರಭದ್ರ ದೇವರ ಮತ್ತೊಂದು ಅವತಾರವೇ ಆಗಿರುವ ಗರಗದ ಶ್ರೀ ಮಡಿವಾಳ ಶಿವಯೋಗಿಗಳ ಕ್ಷೇತ್ರಕ್ಕೆ ಬಂದಿರುವುದು ಅತ್ಯಂತ ಸಂತಸವನ್ನು ತಂದಿದೆ.
ಕರ್ನಾಟಕ ಸೇರಿದಂತೆ ದೇಶದ ಇತರೇ ರಾಜ್ಯಗಳಲ್ಲಿ ನೆಲೆಸಿರುವ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಚುಕ್ಕೋಡಿ ತಾಲೂಕು ಯಡೂರ ಕ್ಷೇತ್ರದ ಶ್ರೀ ವೀರಭದ್ರ ದೇವರು ಲಿಂಗರೂಪಿಯಾಗಿರುವುದು ಬಹಳ ವಿಶೇಷತೆಯನ್ನು ಪಡೆದಿದೆ.
ವೀರಭದ್ರ ದೇವರ ಶಕ್ತಿಯ ಕೃಪಾಶೀರ್ವಾದ ಸಮಸ್ತರಿಗೂ ಪ್ರಾಪ್ತವಾಗಲಿ ಎಂಬ ಉದ್ದೇಶದಿಂದ ಯಡೂರ ಕ್ಷೇತ್ರದಲ್ಲಿ ಜನವರಿ 14 ರಿಂದ ನಿರಂತರ 51 ದಿನಗಳ ಧರ್ಮ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಧರ್ಮ ಸೇವೆಗಳು, ಪೂಜಾ ಕೈಂಕರ್ಯಗಳಲ್ಲಿ ಸಕಲ ಜೀವಾತ್ಮರಿಗೂ ಅವಕಾಶ ಒದಗಿಸಲಾಗಿದೆ. ವೀರಶೈವ ಬ್ರಾಹ್ಮಣ, ಜೈನ್, ಮರಾಠಾ ಸೇರಿದಂತೆ ಸರ್ವ ಧರ್ಮೀಯರಿಂದ ವೀರಭದ್ರ ದೇವರ ಸನ್ನಿಧಿಯಲ್ಲಿ ಭಕ್ತಿ ಸಲ್ಲಿಕೆ ನಡೆಯುವುದರಿಂದ ಸರ್ವಧರ್ಮ ಸಂಸ್ಕೃತಿ ಸಮ್ಮೇಳನವೂ ಯಡೂರ ಕ್ಷೇತ್ರದಲ್ಲಿ ಜರುಗಲಿದೆ ಎಂದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಕ್ಷಿಣ ಭಾರದ ಕುಂಭ ಮೇಳ ಯಡೂರ ಕ್ಷೇತ್ರದಲ್ಲಿ ಜರುಗಲಿದೆ. ಇಲ್ಲಿ ಸರ್ವ ಸಮಾಜ ಬಾಂಧವರಿಗೂ ಪಾಲ್ಗೊಳ್ಳುವ ಅವಕಾಶ. 5 ಸಾವಿರ ಮಹಿಳೆಯರ ಕುಂಭ ಮೇಳ ಲಕ್ಷ ಲಕ್ಷ ಜನರು ಈ ಧರ್ಮ ಯಜ್ಞದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಇದು ಧರ್ಮ ಜಾಗೃತಿ ಅಭಿಯಾನ. ವೀರಶೈವ ಲಿಂಗಾಯತರ ದೇಹದ ಮೇಲೆ ಇಷ್ಟಲಿಂಗಧಾರಣೆ ಇರಬೇಕು ಎಂಬ ಉದ್ದೇಶದಿಂದ ಯಡೂರ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ನಿರಂತರ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಬೇರುಗಂಡಿ ಬ್ರಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಮೊರಬ ಜಡಿಮಠದ ಶ್ರೀಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿಂಗನಹಳ್ಳಿ ಹಳ್ಳಗೇರಿಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಗರಗದ ಕುಮಾರೇಶ್ವರಮಠದ ಶ್ರೀಗಳು,ಯಡೂರ ಕಾಡಸಿದ್ಧೇಶ್ವರಮಠದ ಶ್ರೀ ರೇಣುಕ ದೇವರು, ಶ್ರೀ ಮಡಿವಾಳ ಶಿವಯೋಗಿಗಳ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಅಶೋಕ ದೇಸಾಯಿ, ಮಾಜಿ ಶಾಸಕ ಅಮೃತ ದೇಸಾಯಿ,ಯಡೂರ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಅಡವಯ್ಯ ಅರಳಿಕಟ್ಟಿಮಠ, ಕಟ್ಟಡ ನಿರ್ಮಾಣ ನಿರ್ವಹಣೆ ಪ್ರಭಾರಾಧಿಕಾರಿ ಸುನೀಲ ಬಿರದೆ, ನಾಗನಗೌಡ ನೀರಲಗಿ, ಶ್ರೀ ಮಡಿವಾಳ ಶಿವಯೋಗಿಗಳ ಮಠದ ಟ್ರಸ್ಟ್ ಕಮೀಟಿ ಆಡಳಿತಾಧಿಕಾರಿ ಶಿವಕುಮಾರ ಮೂಕಯ್ಯನಮಠ,’ಜೀವನ ಶಿಕ್ಷಣ’ ಮಾಸಪತ್ರಿಕೆ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಶ್ರೀ ಮಡಿವಾಳ ಶಿವಯೋಗಿಗಳ ಮಠದ ಟ್ರಸ್ಟ್ ಕಮೀಟಿ ಸದಸ್ಯ ಈರಣ್ಣ ದೊಡಮನಿ, ಮಹೇಶ ಹುಬ್ಬಳ್ಳಿ, ಮಡಿವಾಳಯ್ಯ ಹಿರೇಮಠ, ಮಣಬಸಯ್ಯ ಪೂಜಾರ, ಬಸವರಾಜ ಕಮ್ಮಾರ. ಮಂಜುಳಾ ಅಂಗಡಿ ಹಾಗೂ ಗರಗ ಸೇರಿ ಸುತ್ತಲಿನ ಹಲವಾರು ಗ್ರಾಮಗಳ ಭಕ್ತರು ಇದ್ದರು.

