ಮಂಗಳೂರು : 2025 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಎಡಕ್ಕಾನ ಮಹಾಬಲೇಶ್ವರ ಭಟ್ ಅವರು ಆಯ್ಕೆಯಾಗಿದ್ದಾರೆ. ದ. ಕ ಜಿಲ್ಲಾಧಿಕಾರಿಯವರು ನಿನ್ನೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಘೋಷಿಸಿದ್ದು, ಉಧ್ಯಮ ವಿಭಾಗದಲ್ಲಿ ಮಹಾಬಲೇಶ್ವರ ಭಟ್ ಆಯ್ಕೆಯಾಗಿರುತ್ತಾರೆ. ಇವರ ಆಯ್ಕೆಗೆ ಕಾಸರಗೋಡಿನ ಕನ್ನಡಪರ ಸಂಘಟನೆಗಳು ಸಂತೋಷ ವ್ಯಕ್ತಪಡಿಸಿವೆ.
ನವೆಂಬರ್ 1ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನದಂದು ಜಿಲ್ಲಾಡಳಿತವು ಪ್ರಶಸ್ತಿ ನೀಡಿ ಗೌರವಿಸಲಿದೆ.
ಎಡಕ್ಕಾನ ಮಹಾಬಲೇಶ್ವರ ಭಟ್ ಅಥವಾ ರವಿ ಭಟ್ ರವರು ಕಾಸರಗೋಡು ಜಿಲ್ಲೆ ಮತ್ತು ದಕ ಜಿಲ್ಲೆಯಾದ್ಯಂತ ದಾನ ಧರ್ಮ, ಧಾರ್ಮಿಕ ಸಾಮಾಜಿಕ ವಿಚಾರಗಳು ಬಂದಾಗ ಎಲ್ಲರೂ ಕಣ್ಣೆತ್ತಿ ನೋಡುವ ಹೆಸರು. ಯಾವುದೇ ಧಾರ್ಮಿಕ, ಸಾಮಾಜಿಕ ಆರ್ಥಿಕ ಸಹಾಯದ ಅವಶ್ಯಕತೆ ಇದ್ದಾಗ, ದೇವಾಲಯ, ದೇವಸ್ಥಾನಗಳ ಸಮಿತಿಗಳು, ಸಂಘ ಸಂಸ್ಥೆಗಳು ನೆನಪಿಸಿಕೊಳ್ಳುವ ಒಂದು ಮುಂಚೂಣಿಯ ಹೆಸರು ಇವರದ್ದಾಗಿದೆ.
ಕೊಲ್ಲಿ ರಾಷ್ಟ್ರವಾದ ಸಂಯುಕ್ತ ಅರಬ್ ಎಮಿರೇಟ್ಸ್ ನ ದುಬೈ ನಗರವನ್ನು ತನ್ನ ಕರ್ಮ ಭೂಮಿಯನ್ನಾಗಿ ಮಾಡಿರುವ ರವಿ ಭಟ್ ಅವರು, ಕುಂಬಳೆ ಸೀಮೆಯ ಪ್ರತಿಷ್ಠಿತ ಹವ್ಯಕ ಬ್ರಾಹ್ಮಣ ಮನೆತನವಾದ ಎಡಕ್ಕಾನದ ಶಾಮ ಭಟ್ ಅವರ ಪುತ್ರ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವನ್ನು ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ, ಪಿಯುಸಿ ಯನ್ನು ವಿಜಯ ಇವಿನಿಂಗ್ ಕಾಲೇಜ್ ಬೆಂಗಳೂರಿನಲ್ಲಿ ಪಡೆದ ಇವರು ಉಡುಪಿ ಪೂರ್ಣಪ್ರಜ್ಞಾ ಕಾಲೇಜ್ ನಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಗೆ ಸೇರಿದ ಇವರು ಸಿ ಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು.
ಜೀವನದ ಆಸರೆಗಾಗಿ ಮಹಾರಾಷ್ಟ್ರದ ಮುಂಬೈಗೆ ತೆರಳಿದ ಇವರು ಇಲ್ಲಿನ ಅಡ್ವಾನಿ ಅರ್ಲಿಕಾನ್ ಸಂಸ್ಥೆಯಲ್ಲಿ ಟ್ರೈನಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು ನಂತರದ ವರ್ಷದಲ್ಲಿ ಕೊಲ್ಲಿ ರಾಷ್ಟ್ರವಾದ ಬಹರೈನ್ ನಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಅವಕಾಶ ದೊರಕಿತು. 2002 ರಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಿದರು, ಇವರು ರಷ್ಯಾದಲ್ಲಿ ಸ್ಥಾಪಿಸಿದ ಹೆಲಿಕ್ಸ್ ಸಮೂಹ ಸಂಸ್ಥೆ ಕ್ರಮೇಣ ತನ್ನ ವ್ಯವಹಾರವನ್ನು ಉಕ್ರೆನ್, ದುಬೈ ಮತ್ತು ಕಿನ್ಯಾ ರಾಷ್ಟ್ರಗಳಿಗೆ ವಿಸ್ತರಿಸಿತು ಸ್ವಉದ್ಯೋಗಿಯಾಗಿ ಬೆಳೆಯುತ್ತಾ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು ಕಾನತ್ತೂರು ಪುಂಗಾಲಕಾಯ ವೆಂಕಟರಮಣ ಭಟ್ ಅವರ ಪುತ್ರಿ ಸಾಧನಾ ಭಟ್ ಅವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರಿಯರಿದ್ದು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ
ಮಧೂರು ಶ್ರೀ ಮದನಂತೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದಾರದಲ್ಲಿ ಸಹ ತನ್ನಿಂದಾಗುವ ಅತ್ಯಮೂಲ್ಯ ಸೇವೆ ನೀಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಶಕ್ತರಿಗೆ ನೆರವು, ಕಲಿಕಾ ಸಹಾಯ, ವಿವಾಹ ಸಹಾಯ ನೀಡುವ ಮೂಲಕ ಸೇವೆ ಮಾಡುತ್ತಿದ್ದಾರೆ. ಹೀಗೆ ಹಲವು ರೀತಿಯಲ್ಲಿ ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅರ್ಹತೆಗೆ ಸಂದ ಗೌರವ ಎನಿಸಿದೆ.

