ಮಂಗಳೂರು: ಪಾವಂಜೆ ಮೇಳದ ಕಲಾವಿದ, ಪ್ರಬಂಧಕ “ಯಕ್ಷ ರಾಮ ” ಬಿರುದಾಂಕಿತ ಮಾಧವ ಬಂಗೇರ ಕೊಳತ್ತಮಜಲು ಅವರಿಗೆ ಕದ್ರಿ ದೇವಸ್ಥಾನದಲ್ಲಿ ನಡೆದ ಕದ್ರಿ ಯಕ್ಷ ಬಳಗದ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಿರಿಯ ವೈದ್ಯ ಡಾ. ಜಯಶಂಕರ್ ಮಾರ್ಲ, ಉದ್ಯಮಿ ಜಿತೇಂದ್ರ ಕೊಟ್ಟಾರಿ, ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ವಿಜಯ ಕುಮಾರ್ ಮೊಯ್ಲೊಟ್ಟು, ಸಂಜಯ್ ಕುಮಾರ್ ಗೋಣಿಬೀಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕದ್ರಿ ಯಕ್ಷ ಬಳಗದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅವರು ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣೆ ಮಾಡಿದರು. ಅರ್ಚಕ ಕದ್ರಿ ರವಿ ಅಡಿಗ ಅವರು ಶನೀಶ್ವರನ ಕಥೆಯ ” ಛಾಯಾ ನಂದನ ” ನೂತನ ಪ್ರಸಂಗದ ಮೊದಲ ಪ್ರದರ್ಶನ ಆಕರ್ಷಣೀಯವಾಗಿ ಮೂಡಿ ಬಂದಿದ್ದು ಸಾವಿರಾರು ಪ್ರದರ್ಶನಗಳನ್ನು ಕಾಣುವಂತಾಗಲಿ ಎಂದು ಹರಸಿದರು.
ಪ್ರಸಂಗಕರ್ತ ಕದ್ರಿ ನವನೀತ ಶೆಟ್ಟಿ ಅವರು ರಚಿಸಿದ “ಛಾಯಾ ನಂದನ “ಕೃತಿ ಯ ಬಗ್ಗೆ ಮಾತನಾಡಿದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಕೊಳತ್ತಮಜಲು ಅವರನ್ನು ಅಭಿನಂದಿಸಿದರು. ಪ್ರದೀಪ್ ಆಳ್ವ ಕದ್ರಿ ಅವರು ಸನ್ಮಾನಿತರನ್ನು ಅಭಿನಂದಿಸಿದರು. ಬಳಗದ ತಾರಾನಾಥ್ ಶೆಟ್ಟಿ ಬೋಳಾರ, ಲೀಲಾಕ್ಷ ಬಿ ಕರ್ಕೇರ, ಶಿವಪ್ರಸಾದ್ ಎನ್ ಪ್ರಭು, ಗೋಕುಲ್ ಕದ್ರಿ, ಕೃಷ್ಣ ಶೆಟ್ಟಿ ತಾರೆಮಾರ್, ಜಯಶೀಲ ಅಡ್ಯoತಾಯ, ಹರೀಶ್ ಕುಮಾರ್ ಚಿತ್ರಾಪುರ, ಎಲ್ಲೂರು ರಾಮಚಂದ್ರ ಭಟ್, ಮಹೇಶ್ ಪಾಟೀಲ್ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ಧನ್ಯವಾದ ಸಮರ್ಪಿಸಿದರು.

