ಧಾರವಾಡ : ಎಲ್ಲೆಡೆ ಇಂದು ಶಾಸ್ತ್ರ ವಿಷಯ ಸಂಶೋಧಕರ ಕೊರತೆ ಎದ್ದುಕಾಣುತ್ತಿದ್ದು, ಕನ್ನಡದ ವಿದ್ವತ್ ಪರಂಪರೆ ಕ್ಷೀಣಿಸುತ್ತಿದೆ ಎಂದು ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಡಿ.ವ್ಹಿ.ಪರಮಶಿವಮೂರ್ತಿ ಹೇಳಿದರು.
ಅವರು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಡಾ.ಎಸ್.ವಿದ್ಯಾಂಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ನಗರದ ಹಿರಿಯ ಭಾಷಾ ವಿಜ್ಞಾನಿ, ವಿದ್ವಾಂಸ ಡಾ.ಸಂಗಮೇಶ ಸವದತ್ತಿಮಠ ಅವರಿಗೆ 2025ನೆಯ ಸಾಲಿನ ವಿದ್ಯಾಶಂಕರ ಪ್ರಶಸ್ತಿ ಮತ್ತು ಕುಪ್ಪಂ ದ್ರಾವಿಡ ವಿ.ವಿ.ಯ ಡಾ.ಜಯಲಲಿತ ಅವರಿಗೆ ವಿದ್ಯಾಶಂಕರ ಪುರಸ್ಕಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು. ವಚನ ವಾಙ್ಮಯದಲ್ಲಿ ಡಾ.ಸಂಗಮೇಶ ಸವದತ್ತಿಮಠ ಅವರು ಬರೆದಿರುವ ‘ವರ್ಣನಾತ್ಮಕ ವಚನ ಪದಕೋಶ’ ಬಹಳ ಅಪರೂಪದ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದರು
ಶ್ರೀನಿಡುಮಾಮಿಡಿ ಗೂಳೂರು ಸಂಸ್ಥಾನಮಠದ ಶ್ರೀವೀರಭದ್ರ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿ.ವಿ. ಪ್ರಾಧ್ಯಾಪಕ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, ವಿಶ್ರಾಂತ ಪ್ರಾಚಾರ್ಯ ಡಾ. ಸಿ. ಶಿವಕುಮಾರಸ್ವಾಮಿ, ಖ್ಯಾತ ಅನುವಾದಕಿ ಡಾ.ಮರ್ವಿಳಿ, ವಿದ್ಯಾಶಂಕರರ ಮಗಳು ಪ್ರಿಯದರ್ಶಿನಿ ಸೇರಿದಂತೆ ಡಾ. ಎಸ್.ವಿದ್ಯಾಂಶಂಕರ ಸಾಂಸ್ಕೃತಿಕ ಪ್ರತಿಷ್ಠಾನದ ವಿವಿಧ ಪದಾಧಿಕಾರಿಗಳು ಇದ್ದರು. ಪ್ರಶಸ್ತಿಯು 30 ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ-ಫಲಕವನ್ನು ಒಳಗೊಂಡಿದೆ.

