ಉಳ್ಳಾಲ : ಸಂವಿಧಾನದ ಅಡಿಯಲ್ಲಿ ದೇಶದ ಭವಿಷ್ಯ ಉಜ್ವಲವಾಗಿದ್ದು, ಸುಭದ್ರ ಮತ್ತು ಶಕ್ತಿಶಾಲಿ ಭಾರತಕ್ಕೆ ಸಂವಿಧಾನ ಭದ್ರ ಬುನಾದಿ ಹಾಕಿದೆ. ಸಂವಿಧಾನ ನೀಡಿದ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ಯಾನೆಲ್ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಹೇಳಿದರು.

ಮಂಗಳೂರು ಹೊರವಲಯದ ಕೋಟೆಕಾರು ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ “ಸಂವಿಧಾನ ದಿನ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ಜಗತ್ತಿನ ಅತ್ಯಂತ ಬೃಹತ್ ಮತ್ತು ಪರಿಣಾಮಕಾತಿ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಬದುಕಿಗೆ ಘನತೆ ತಂದುಕೊಟ್ಟ ಸಂವಿಧಾನದ ಪ್ರತಿಯೊಂದು ವಾಕ್ಯಗಳೂ ಅಮೂಲ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮುಖ್ಯ ಪ್ರಾಧ್ಯಪಕರಾದ ಶ್ರೀಮತಿ ಪ್ರಮೀಳಾ ಎ.ಸಿ. ಅವರು, ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರಿನ ನ್ಯಾಯವಾದಿಗಳಾದ ಪ್ರೇಮ್ ಕುಮಾರ್ ಪದವು, ಜೂಲಿಯಾನ ಎ.ಸಿ., ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂವಿಧಾನ ನಡೆದುಬಂದ ಹಾದಿ, ಅದು ರೂಪುಗೊಂಡ ಬಗೆ ಕುರಿತು ವಿದ್ಯಾರ್ಥಿಗಳಿಂದ ಚುಟುಕು ರಂಗ ಪ್ರದರ್ಶನ (ಸ್ಕಿಟ್)ಗಳು ನಡೆದವು. ಸಂವಿಧಾನ ದ ಹಕ್ಕುಗಳು, ಕರ್ತವ್ಯಗಳು ಹಾಗೂ ದೇಶಭಕ್ತಿ ಗೀತೆಗಳಿಗೆ ನೃತ್ಯ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ದೀಕ್ಷಿತಾ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.

