ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿರುವ ರಮಾಶಕ್ತಿ ಮಿಷನ್ ನಲ್ಲಿ ಡಿಸೆಂಬರ್ 25 ರಿಂದ 29ರವರೆಗೆ ಐದು ದಿನಗಳ ಕಾಲ ಅತ್ಯಂತ ಶಕ್ತಿಶಾಲಿ ವೈದಿಕ ಯಾಗವಾದ ಸಹಸ್ರ ಚಂಡಿಕಾಯಾಗ ಲೋಕ ಕಲ್ಯಾಣಕ್ಕಾಗಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿಯಾದ ಸುಧಾ ಪ್ರಸಾದ್ ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವೇದ ಶಾಸ್ತ್ರಾನುಸಾರ ನಿರ್ಮಿತ 10 ಹೋಮ ಕುಂಡಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಖುತ್ವಿಕರು ನಿರಂತರ ಯಾಗದಲ್ಲಿ ಪಾಲ್ಗೊಳ್ಳುತ್ತಾರೆ. ಭಾರತದ ಸಂಸತ್ ಭವನದ ಶಿಲಾನ್ಯಾಸ ನೆರವೇರಿಸಿದ ವೈದಿಕ ಪಂಡಿತರಾದ ಶ್ರೀ ಲಕ್ಷ್ಮೀ ನಾರಾಯಣ ಸೋಮಯಾಜಿ ಅವರು ಈ ಯಾಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ, ದಿನಾಂಕ 29 ರಂದು ನಡೆಯುವ ಮಹಾ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಶ್ರಂಗೇರಿ ಶಾರದಾ ಮಠದ ಪೀಠಾಧಿಪತಿಯಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಅನುಗ್ರಹಿಸಲಿದ್ದಾರೆ. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.

ಡಿ.23ರಂದು ಹೊರಕಾಣಿಕೆ ನಡೆಯಲಿದೆ. ಕಾಣಿಕೆ ನೀಡಲಿಚ್ಚಿಸುವವರು ದಿನಾಂಕ.23ರಂದು ಸಂಜೆ 4ಗಂಟೆಯ ಒಳಗೆ ದೇವಸ್ಥಾನಕ್ಕೆ ತಂದೊಪ್ಪಿಸಬೇಕಾಗಿ ತಿಳಿಸಿದರು. 25ರಂದು ಗಣಹೋಮ,26 ಶುಕ್ರವಾರದಂದು ಲಕ್ಷ್ಮೀನಾರಾಯಣ ಹ್ರದಯ ಹೋಮ,27ಶನಿವಾರದಂದು ನವಗ್ರಹ ಸಹಿತ ಮಹಾಮ್ರತ್ಯುಂಜಯ ಹೋಮ,28 ರಂದು ಧನ್ವಂತರಿ ಹೋಮ ಹಾಗೂ 29ರಂದು ಮಹಾ ಚಂಡಿಕಾ ಹೋಮ ನಡೆಯಲಿದೆ.ಅಲ್ಲದೆ ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿರುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉದಯ್.ಡಿ.ಭಟ್ಕಳ್ ಅಧ್ಯಕ್ಷರು,ಡಾ.ಪೂರ್ಣಿಮಾ ಬಾಳಿಗ,ಅಶೋಕ್ ಕಾಮತ್, ಚಿನ್ಮಯಿ,ಹೇಮಂತ್ ಉಪಸ್ಥಿತರಿದ್ದರು.

