ಮಂಗಳೂರು: ಕರಾವಳಿ ಭಾಗದ ಸಂಗೀತಾಸಕ್ತರಿಗೆ ನಾವೀನ್ಯ ರೀತಿಯ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿರುವ ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಜನವರಿ 18ರಂದು ಭಾನುವಾರ ಸಂಜೆ 6.00ರಿಂದ ‘ಲಯ ಲಾವಣ್ಯ’ ಎಂಬ ಭಾರತೀಯ ತಾಳವಾದ್ಯಗಳ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಟ್ರಸ್ಟಿ ಅಂಕುಶ್.ಎನ್. ನಾಯಕ್ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,’ಕರ್ಣಾಟಕ ಬ್ಯಾಂಕ್ನ’ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ನಿರ್ದೇಶನವನ್ನು ಖ್ಯಾತ ಮೃದಂಗ ವಿದ್ವಾಂಸರಾದ ಆನೂರು ಅನಂತಕೃಷ್ಣ ಶರ್ಮಾ ವಹಿಸಿಕೊಂಡಿದ್ದಾರೆ. ಅವರು ಮೃದಂಗ, ಉಡುಕ್ಕೆ, ದಮ್ಮಡಿ ಹಾಗೂ ಕರಟ ವಾದ್ಯಗಳ ಮೂಲಕ ಕಾರ್ಯಕ್ರಮಕ್ಕೆ ಲಯಾತ್ಮಕ ನೇತೃತ್ವ ನೀಡಲಿದ್ದಾರೆ ಎಂದರು.
‘ಲಯ ಲಾವಣ್ಯ’ ತಂಡವು ಶ್ರುತಿಯ ಸೂಕ್ಷ್ಮತೆ, ಶಾಸ್ತ್ರೀಯ ತಾಳಗಳ ಗಂಭೀರತೆ ಮತ್ತು ವೈವಿಧ್ಯಮಯ ಸಂಗೀತ ಶೈಲಿಗಳ ಸುಂದರ ಸಂಯೋಜನೆಯ ಮೂಲಕ ಶೋತೃಗಳನ್ನು ಸಂಗೀತಾನಂದದ ಲೋಕಕ್ಕೆ ಕರೆದೊಯ್ಯಲು ಸಂಗೀತೋತ್ಸವ ಕಾರ್ಯಕ್ರಮ ಸಾಕ್ಷಿಯಾಗಲಿದೆ ಎಂದರು.

ಕೊಳಲಿನಲ್ಲಿ ವಿದ್ವಾನ್ ರಾಜಕಮಲ್, ವಯೋಲಿನ್ನಲ್ಲಿ ವಿದ್ವಾನ್ ಕೆ.ಜೆ. ದಿಲೀಪ್, ಖಂಜಿರಿ ಮತ್ತು ಪ್ರೇಮ್ ಡ್ರಮ್ನಲ್ಲಿ ಸುನಾದ್ ಆನೂರು, ಮೃದಂಗ, ಮದ್ದಳೆ ಹಾಗೂ ಶ್ರೀಖೋಲ್ನಲ್ಲಿ ನಾಗೇಂದ್ರ ಪ್ರಸಾದ್, ಫಟಂನಲ್ಲಿ ಫಣೀಂದ್ರ, ಮೊಚಿರ್ಂಗ್ನಲ್ಲಿ ಚಿದಾನಂದ, ಡ್ರಮ್ ನಲ್ಲಿ ಗೋಪಿ ಶ್ರವಣ್, ಬೇಸ್ ಟೇಪ್, ಚಂಡೆ ಮತ್ತು ಕಹೋನ್ನಲ್ಲಿ ಸುಮಧುರ ಆನೂರು, ಪಖಾವಜ್ ಮತ್ತು ಡೋಲಕ್ನಲ್ಲಿ ಆನೂರು ಪ್ರಬೋಧ ಶ್ಯಾಮ್, ತಬ್ಲಾದಲ್ಲಿ ಸುದತ್ತ, ತಬ್ಲಾ, ತಮಟೆ ಹಾಗೂ ವಿವಿಧ ಪರ್ಕಶನ್ ವಾದ್ಯಗಳಲ್ಲಿ ಆನೂರು ವಿನೋದ್ ಶ್ಯಾಮ್ ಸಹಕರಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಖಜಾಂಚಿ ಕರುಣಾಕರ ಬಳ್ಳೂರು, ಟ್ರಸ್ಟಿಗಳಾದ ಮುರಳೀಧರ್ ಜಿ.ಶೆಣೈ ,ಡಾ.ರಮೇಶ್ ಉಪಸ್ಥಿತರಿದ್ದರು.

