ಧಾರವಾಡ : ಶಾಲಾ ಶಿಕ್ಷಣದ ಜ್ಞಾನಾರ್ಜನೆಗೆ ಗಮನ ನೀಡಿದಂತೆ ವಿದ್ಯಾರ್ಥಿಗಳಲ್ಲಿ ಸಾತ್ವಿಕ ಚೈತನ್ಯವನ್ನು ತುಂಬುವ ಸತ್ಯ ಶುದ್ಧ ಸಂಸ್ಕಾರದ ಶಿಕ್ಷಣಕ್ಕೂ ಆದ್ಯತೆ ನೀಡಿ ವಿದ್ಯಾರ್ಥಿಗಳ ನೈತಿಕ ವ್ಯಕ್ತಿತ್ವ ವಿಕಾಸಕ್ಕೆ ಪಾಲಕರು, ಪೋಷಕರು ಹಾಗೂ ಶಿಕ್ಷಕರು ಶ್ರಮಿಸಬೇಕೆಂದು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಅವರು ನಗರದ ಕಮಲಾಪೂರ ಜ್ಞಾನಜ್ಯೋತಿ ವಿದ್ಯಾಲಯದ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜ್ಞಾನಜ್ಯೋತಿ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ನೆಲದ ಪರಂಪರೆ ಉನ್ನತ ಆದರ್ಶಗಳನ್ನು ಹೊತ್ತು ನಿಂತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಮೇರು ವ್ಯಾಸಂಗಗಳಲ್ಲಿ ಯಶಸ್ಸು ಸಾಧಿಸುವಂತೆ ನಿತ್ಯದ ದಿನಚರಿಯಲ್ಲಿ ಭಾರತೀಯ ಸಂಸ್ಕೃತಿಯ ಯೋಗ, ಧ್ಯಾನ, ಸನ್ನಡತೆಗಳನ್ನು ರೂಢಿಸಿಕೊಂಡು ಭಾರತದ ಮಣ್ಣಿನಲ್ಲಿ ಹುದುಗಿರುವ ಆದರ್ಶಗಳನ್ನು ತಮ್ಮ ಬದುಕಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ನೆರವಾಗುವಂತೆ ಎಲ್ಲರ ಮಾರ್ಗದರ್ಶನ ಇರಬೇಕು ಎಂದರು.

ಗುರುತರ ಜವಾಬ್ದಾರಿ : ಮುಖ್ಯ ಅತಿಥಿಯಾಗಿದ್ದ ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ನಾವಿಂದು ಭ್ರಷ್ಟಾಚಾರಮುಕ್ತ ಭಾರತವನ್ನು ಎದುರುನೋಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಉತ್ಕೃಷ್ಟ ಮಾನವ ಸಂಪನ್ಮೂಲವು ಭಾರತಕ್ಕೆ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರವನ್ನು ಮುನ್ನಡೆಸುವ ಭಾವೀ ನಾಯಕರಾಗಲಿರುವ ಇಂದಿನ ವಿದ್ಯಾರ್ಥಿಗಳಲ್ಲಿ ಸತ್ಯ, ಶಾಂತಿ, ಅಹಿಂಸೆ, ಅಸ್ತೇಯ, ದಯೆ, ಕ್ಷಮೆ, ದಾನದಂತಹ ಉನ್ನತ ಜೀವನ ಮೌಲ್ಯಗಳ ವರ್ಧನೆಗೆ ತೀವ್ರ ಗಮನಹರಿಸಬೇಕಾಗಿದೆ. ಈ ಗುರುತರ ಜವಾಬ್ದಾರಿಯನ್ನು ವಿದ್ಯಾರ್ಥಿಗಳ ಪಾಲಕರು, ಪೋಷಕರು ಮತ್ತು ಶಿಕ್ಷಕರು ತೆಗೆದುಕೊಳ್ಳಬೇಕು ಎಂದರು.

ಮಹಾನಗರ ಪಾಲಿಕೆ ಸದಸ್ಯ ರಾಜು ಕಮತಿ ಹಾಗೂ ಶಿಕ್ಷಣ ಚಿಂತಕ ಮಲ್ಲಿಕಾರ್ಜುನ ಚಿಕ್ಕಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿದ್ಯಾಚೇತನ ಎಜ್ಯೂಕೇಷನ್ ಸೊಸೈಟಿ ಅಧ್ಯಕ್ಷ ಪುತ್ರಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಎಜ್ಯೂಕೇಷನ್ ಸೊಸೈಟಿ ಕಾರ್ಯದರ್ಶಿ ಸಂಗಯ್ಯ ಟಿ. ಹಿರೇಮಠ, ಮುಖ್ಯಾಧ್ಯಾಪಕಿ ಗಿರಿಜಾ ಹೊಟ್ಟಿ, ಐಟಿಐ ಪ್ರಾಚಾರ್ಯ ಮೊಹಮ್ಮದ ಅಬ್ಬಾಸ್ ಸದರಬಾಯಿ, ಮೃತ್ಯುಂಜಯ ಹಿರೇಮಠ ಇದ್ದರು. ವಿದ್ಯಾರ್ಥಿಗಳಾದ ನಿಧಿ ಕೆ.ವ್ಹಿ., ಸೃಷ್ಟಿ ತೋಟಿಗೇರ, ಮಹಿನೂರ ಬಡ್ಡಣ್ಣವರ, ಭುವನ್ ಕಮತಿ, ಗೌರಿ ಕಡ್ಲಿ ಹಾಗೂ ಶ್ರೇಯಾ ಹುಜರತ್ತಿ ಅವರು ತಮ್ಮ ಸ್ಪುಟವಾದ ಮಾತುಗಳಿಂದ ವೇದಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಗಮನಸೆಳೆದರು. ಪ್ರಜ್ವಲ್ ಹಿರೇಮಠ ವಂದಿಸಿದರು. ಜ್ಞಾನಜ್ಯೋತಿ ಸಾಂಸ್ಕೃತಿಕ ಉತ್ಸವದಲ್ಲಿ ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ಪ್ರದರ್ಶನಗೊಂಡವು.

