ಮಂಗಳೂರು : ಕನ್ನಡ ನಾಡು-ನುಡಿ ಹಾಗೂ ಶಿಕ್ಷಣದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳನ್ನು ಸಬಲೀಕರಣಗೊಳಿಸುವ ಮತ್ತು ಸರ್ಕಾರಿ ಶಾಲೆಗಳ ಹಿತರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ಮಾಧ್ಯಮಗಳ ಸಹಕಾರ ಮತ್ತು ಸಮರ್ಪಕ ಸಂವಹನದ ಅಗತ್ಯವಿದ್ದು, ಸುದೇಶ್ ಕುಮಾರ್ ಅವರ ಸುದೀರ್ಘ ಪತ್ರಿಕಾ ಅನುಭವವು ಈ ನಿಟ್ಟಿನಲ್ಲಿ ಆನೆಬಲ ತಂದಿದೆ.
ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಸುದೇಶ್ ಕುಮಾರ್ ಅವರು ಸಮಾಜಮುಖಿ ಕಳಕಳಿಯ ಬರಹಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನು ಮುಂದೆ ಅಭಿಯಾನದ ಅಧಿಕೃತ ಮಾಹಿತಿ, ಉದ್ದೇಶಗಳು ಮತ್ತು ಮುಂಬರುವ ಯೋಜನೆಗಳನ್ನು ಮಾಧ್ಯಮಗಳಿಗೆ ತಲುಪಿಸುವ ಸಂಪರ್ಕ ಸೇತುವೆಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಹೊಂದಿರುವ ಸಂಘಟನಾ ಚತುರತೆಯು ಅಭಿಯಾನವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಸಹಕಾರಿಯಾಗಲಿದೆ. “ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿಯ ತಾಯಿಬೇರುಗಳು.ಈ ಅಭಿಯಾನದ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,” ಎಂದು ಸುದೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಭಿಯಾನದ ರಾಜ್ಯ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಸುದೇಶ್ ಕುಮಾರ್ ಅವರ ಈ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಅವರ ಮುಂದಿನ ಸಮಾಜಮುಖಿ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ.

