ಮಂಗಳೂರು, ಫೆ.4: ನಗರದ ನಂತೂರು ವೃತ್ತದ ಬಳಿ ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಹಿಂಬದಿ ಸವಾರೆಯ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಮೃತಪಟ್ಟ ಯುವತಿ. ಈಕೆ ತನ್ನ ಭಾವೀ ಪತಿಯೊಂದಿಗೆ ಶಿವಭಾಗ್ ಕಡೆಯಿಂದ ಸ್ಕೂಟರ್ ನಲ್ಲಿ ವಾಮಂಜೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಸಾಗುತ್ತಿದ್ದ 22 ನಂಬರಿನ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಹಿಂಬದಿಯಿದ್ದ ಸವಾರೆ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಬಸ್ ಆಕೆಯ ಹೊಟ್ಟೆಯ ಮೇಲೆ ಹರಿದಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಷ್ಟರಲ್ಲಿ ಆಕೆ ಅಸುನೀಗಿದ್ದಾರೆ. ಸ್ಕೂಟರ್ ಸವಾರನಾಗಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ.

ಬಸ್ ವೇಗವಾಗಿತ್ತೇ ಸ್ಕೂಟರ್ ಬಲ ಭಾಗದಿಂದ ಎದುರಿಗೆ ಬಂದಿತ್ತೇ ಎನ್ನುವುದು ಗೊತ್ತಾಗಿಲ್ಲ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಮತ್ತು ಯುವಕ ವಾಮಂಜೂರಿನಲ್ಲಿ ಬರ್ತ್ ಡೇ ಪಾರ್ಟಿಗೆಂದು ತೆರಳುತ್ತಿದ್ದರೆಂದು ತಿಳಿದುಬಂದಿದೆ.

