ಧಾರವಾಡ : ದ್ವಂದ್ವಗಳನ್ನು ಅಳಿಸಿ ಹಾಕಿ ಅಂತರಂಗ ಬಹಿರಂಗಗಳಲ್ಲಿ ಅರಿವಿನ ಮಹಾಪ್ರಕಾಶವನ್ನು ಬೆಳಗೆಸುವ ಆಧ್ಯಾತ್ಮದಿಂದ ವಿಶ್ವಶಾಂತಿ ಸಾಮರಸ್ಯ ಸಾಧ್ಯವಾಗುತ್ತದೆ ಎಂದು ಹೆಬ್ಬಳ್ಳಿ ಬ್ರಹ್ಮ ಚೈತನ್ಯ ಆಶ್ರಮದ ಶ್ರೀದತ್ತಾವಧೂತ ಸ್ವಾಮೀಜಿ ಹೇಳಿದರು.
ಅವರು ಹತ್ತಿರದ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ 2ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಧರ್ಮ ಸಿದ್ಧಾಂತಗಳ ತತ್ವ, ಚಿಂತನೆ ಮತ್ತು ಆಚರಣೆಗಳಲ್ಲಿ ವೈವಿಧ್ಯತೆಗಳಿದ್ದರೂ ಎಲ್ಲರೂ ಸೇರುವ ಗುರಿ ಮಾತ್ರ ಒಂದೇ ಆಗಿದೆ. ಸಾಕ್ಷಾತ್ಕಾರ ಸಂಪಾದನೆಯಲ್ಲಿ ಮಾನವನ ಬದುಕಿನ ಸಾರ್ಥಕತೆ ಅಡಗಿದೆಯೆಂದು ಅವರು ಹೇಳಿದರು.

ಕಲ್ಬುರ್ಗಿ ಜಿಲ್ಲೆ ಶಹಬಾದ ತಾಲೂಕು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಹೆಬ್ಬಳ್ಳಿ ಒಂದು ತಪೋತಾಣ; ಜೊತೆಗೆ ಧರ್ಮ ಕ್ಷೇತ್ರವೂ ಆಗಿದೆ. ಇಲ್ಲಿಯ ಹಿರಿಯರು ಹೇಳುವಂತೆ ಹೆಬ್ಬಳ್ಳಿ ಗ್ರಾಮದಲ್ಲಿ ನೂರೊಂದು ಬಾವಿಗಳು ಹಾಗೂ ನೂರೊಂದು ದೇವಾಲಯಗಳು ಇರುವುದು ವಿಶೇಷವಾಗಿದೆ. ಇಲ್ಲಿಯ ಜನಮನದಲ್ಲಿ ಧರ್ಮ ಮತ್ತು ಭಗವಂತನ ಅಸ್ತಿತ್ವದಲ್ಲಿ ಬಲವಾದ ನಂಬಿಕೆ ಹಾಗೂ ಭಕ್ತಿ ಮೇಳೈಸಿರುವುದು ಎದ್ದುಕಾಣುತ್ತದೆ ಎಂದರು.
ಮಣಕವಾಡದ ಶ್ರೀಅಭಿನವ ಮೃತ್ಯುಂಜಯ ಸ್ವಾಮೀಜಿ ಶಿಷ್ಯರಾದ ಶ್ರೇಷ್ಠ ದೇವರು ವೇದಿಕೆಯಲ್ಲಿದ್ದರು. ಶ್ರೀಶೈಲ ಲಕ್ಕಮ್ಮನವರ ಸ್ವಾಗತಿಸಿದರು. ಗಿರಿಮಲ್ಲಯ್ಯ ನಂದಿಕೋಲಮಠ ನಿರೂಪಿಸಿದರು. ಶಿವಾನಂದ ಹೂಗಾರ ವಂದಿಸಿದರು.


