ಮಂಗಳೂರು : ಮಹಿಳಾ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ‘ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್’ (WCPL) 2026 ಟೂರ್ನಿಯು ಬೆಂಗಳೂರಿನ ಬನಶಂಕರಿಯ ಪಿಇಎಸ್ ಯೂನಿವರ್ಸಿಟಿ ಕ್ರಿಕೆಟ್ ಮೈದಾನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಡಾ.ಸಂದೀಪ್ ಪಿ. ಶೆಟ್ಟಿ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ಈ ಟೂರ್ನಿಯಲ್ಲಿ ‘ನಮ್ಮ ಉಡುಪಿ’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಡಾ.ಸಂದೀಪ್ ಶೆಟ್ಡಿ ಹೇಳಿದರು

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದಲ್ಲೇ ಮೊದಲ ಬಾರಿಗೆ 125 ಗ್ರಾಂ ಹಾರ್ಡ್ ಟೆನ್ನಿಸ್ ಬಾಲ್ ಬಳಸಿ ವೃತ್ತಿಪರ ಮಹಿಳಾ ಟೂರ್ನಿಯನ್ನು ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಬಂದ 80ಕ್ಕೂ ಹೆಚ್ಚು ವೃತ್ತಿಪರ ಮಹಿಳಾ ಕ್ರಿಕೆಟಿಗರು ಈ ಟೂರ್ನಿಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಮಂಡ್ಯ ಕ್ವೀನ್ಸ್, ಕಿತ್ತೂರು ಕೇಸರಿ XI, ಮೈಸೂರು ಮಹಾರಾಣೀಸ್, ನಮ್ಮ ಉಡುಪಿ, ಮಂಗಳೂರು ಟೈಗರ್ಸ್ ಮತ್ತು ರಾಯಲ್ ಎಮರಾಲ್ಡ್ ಬೆಂಗಳೂರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.
ಫೈನಲ್ ಪಂದ್ಯದಲ್ಲಿ ‘ನಮ್ಮ ಉಡುಪಿ’ ತಂಡವು ಜಯಗಳಿಸಿ 15 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್-ಅಪ್ ಸ್ಥಾನ ಪಡೆದ ‘ಮೈಸೂರು ಮಹಾರಾಣೀಸ್’ ತಂಡಕ್ಕೆ 12 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು ಎಂದರು.
ಈ ಟೂರ್ನಿಗೆ ಪ್ರಕಾಶ್ ಕುಂಪಲ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಡಾ. ಟಿ.ಎ. ಶರವಣ, ಮತ್ತು ಶ್ರೀ ಸಾಯಿ ಪ್ಯಾರಡೈಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ವೀರಭದ್ರಾಚಾರಿ ಕೆ.ಎಂ ಪ್ರಮುಖ ಪ್ರಾಯೋಜಕರಾಗಿ ಸಾಥ್ ನೀಡಿದ್ದರು. ಇದರೊಂದಿಗೆ SSK ಪ್ರೊಡಕ್ಷನ್ಸ್ & ಇಂಟೀರಿಯರ್ಸ್ ಸಂಸ್ಥೆಯು ಕೂಡಾ ಬೆಂಬಲವನ್ನು ಒದಗಿಸಿದೆ. ಆಲ್ ಇಂಡಿಯಾ ಮೆನ್ಸ್ & ವುಮೆನ್ಸ್ ಸ್ಪೋರ್ಟ್ಸ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಈ ಕಾರ್ಯಕ್ರಮ ನಡೆಯಿತು. WCPL ಅಧ್ಯಕ್ಷರಾದ ಡಾ. ಸಂದೀಪ್ ಪಿ. ಶೆಟ್ಟಿ, ಅಂಬಿಕಾ ಬಿ.ಎಸ್. ಮತ್ತು ಉಪಾಧ್ಯಕ್ಷರಾದ ಸರ್ವಮಂಗಳ ಅವರ ನೇತೃತ್ವದಲ್ಲಿ ಟೂರ್ನಿ ಸುಸೂತ್ರವಾಗಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಪಮ್ಮಿ ಕೊಡಿಯಾಲ್ ಬೈಲ್, ರೋಶನ್ ರೈ, ಜಯಂತಿ ಶೆಟ್ಟಿ, ಭರತ್, ಕಿಶೋರ್, ಅಶೋಕ್ ಮುಂತಾದವರು ಉಪಸ್ಥಿತರಿದ್ದರು.

