ಮಂಗಳೂರು : ದಕ್ಷಿಣ ಕನ್ನಡದ ಈಜು ಪ್ರತಿಭೆಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸಿಕೊಡಬೇಕೆಂಬ ದೃಷ್ಟಿಯಿಂದ ನಮ್ಮ ಸರ್ಕಾರವು ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ FINA Standard ಅಳವಡಿಸಿ ನಿರ್ಮಿಸಿದ ಅಂತರಾಷ್ಟ್ರೀಯ ಮಟ್ಟದ ಈಜುಕೊಳ ಎಮ್ಮೆಕೆರೆ ಈಜು ಕೊಳ. ಇದು ರಾಷ್ಟ್ರದಲ್ಲಿರುವ ಉತ್ತಮ ರೀತಿಯ 10 ಅಂತರಾಷ್ಟ್ರೀಯ ಈಜುಕೊಳಗಳ ಪೈಕಿ ಒಂದಾಗಿರುತ್ತದೆ. ಇದು ನಮ್ಮ ಜಿಲ್ಲೆಗೆ ಒಂದು ಹೆಮ್ಮೆಯ ವಿಚಾರವಾಗಿರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನವೀನ್ ರವರು ತಿಳಿಸಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯು ಇಂತಹ ಉತ್ತಮ ಈಜುಕೊಳವನ್ನು ಮುನ್ನಡೆಸಲು ಒಂದು ಉತ್ತಮ ಈಜು ಸಂಸ್ಥೆಗೆ ನೀಡಬೇಕೆನ್ನುವ ದೃಷ್ಟಿಯಿಂದ ಸಮಿತಿಗಳನ್ನು ರಚಿಸಿ ಅವರ ಸಲಹೆ ಸೂಚನೆಗಳ ಮೇರೆಗೆ ಹಲವು ಹಂತಗಳ ಪ್ರಕಾರ ಟೆಂಡರ್ ಪ್ರಕ್ರಿಯೆಯನ್ನು ನಡೆಸಿದ್ದರು ಹಾಗೂ ಇಲ್ಲಿ ಉತ್ತಮ ಮಾರ್ಗದರ್ಶಕರು ಇದ್ದು ಇದನ್ನು ಸದುಪಯೋಗಪಡಿಸಬೇಕೆಂದು ತಿಳಿಸಿದ್ದಾರೆ.
ಈ ಟೆಂಡರ್ ಪ್ರಕ್ರಿಯೆಯಲ್ಲಿ ನಾವು ಭಾಗವಹಿಸಿ ತೆರೆದ ಟೆಂಡರ್ ಮೂಲಕ 50 ಲಕ್ಷ ರೂಪಾಯಿ ಭದ್ರತಾ ಠೇವಣಿ ಹಾಗೂ ಪ್ರತಿ ತಿಂಗಳಿಗೆ 2,61,101/- ನೀಡುವ ಷರತ್ತಿಗೆ ಒಪ್ಪಿಗೆ ಪಡೆದುಕೊಂಡು ಕಳೆದ ಮೂರು ತಿಂಗಳಿನಿಂದ ಯಾವುದೇ ಸಮಸ್ಯೆ ಇಲ್ಲದೆ ಮುನ್ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ನೀರಿನ ಗುಣಮಟ್ಟವನ್ನು ಕಾಪಾಡಲು 7.25 ರಿಂದ 7.50 ಪಿ.ಎಚ್ ಮಟ್ಟವನ್ನು ಕಾಯ್ದುಕೊಂಡು ಬರುತ್ತಿದ್ದೇವೆ. ಹಾಗೂ ಇದನ್ನು ಡಿವೈಇಸ್ ಅಧಿಕಾರಿಗಳು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿದ್ದುಪ್ರಸ್ತುತ ಈಜುಕೊಳ ಬೆಳಿಗ್ಗೆ 5:30 ಕ್ಕೆ ಆರಂಭಗೊಂಡು, ರಾತ್ರಿ 9.45 ರವರೆಗೆ ತೆರೆದಿರುತ್ತದೆ ಎಂದು ತಿಳಿಸಿದರು.
ಬೆಳಿಗ್ಗೆ 10:00 ರಿಂದ ಸಂಜೆ 3.00 ರವರೆಗೆ ದಿನನಿತ್ಯದ ಈಜು ಕೊಳ ನಿರ್ವಹಣೆ ಹಾಗೂ ಶಾಲಾ ಮಕ್ಕಳ ಈಜು ತರಬೇತಿಗೆ ಅವಕಾಶವಿರುತ್ತದೆ. ಸೋಮವಾರ ಈಜು ಕೊಳಕ್ಕೆ ವಾರದ ರಜಾ ದಿನವಾಗಿದ್ದು ಆ ದಿನದಂದು ಈಜುಕೊಳದ ಸಂಪೂರ್ಣ ನಿರ್ವಹಣೆಯ ಕಾರ್ಯ ನಡೆಯುತ್ತದೆ. ಇದನ್ನು ಹೊರತುಪಡಿಸಿ ಜೀವ ರಕ್ಷಕರು ಇಲ್ಲದಂತಹ ಸಂದರ್ಭದಲ್ಲಿ ಇಲ್ಲಿ ಈಜಲು ಯಾರಿಗೂ ಅವಕಾಶವಿರುವುದಿಲ್ಲ ಎಂದರು.
ASCA, NIS, Austswim, KSA, SFI ತರಬೇತಿದಾರರು ಹಾಗೂ ಜೀವ ರಕ್ಷಕರು ಈಜುಕೊಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು.ಶುಚಿತ್ವ ಕಾಪಾಡಲು ಹೌಸ್ ಕೀಪಿಂಗ್, ಭದ್ರತೆಗೋಸ್ಕರ ಸೆಕ್ಯೂರಿಟಿ ಗಾರ್ಡ್ಸ್, ದಿನನಿತ್ಯದ ಈಜುಕೊಳದ ನಿರ್ವಹಣೆಗೆ ಸಿಬ್ಬಂದಿಗಳು ಮತ್ತು ಅವರ ಮೇಲ್ವಿಚಾರಕರು ಹಾಗೂ ಮ್ಯಾನೇಜರ್ ಎಲ್ಲರೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರ ವೇತನ ಹಾಗೂ ಈಜುಕೊಳಕ್ಕೆ ಬೇಕಾಗುವಂತಹ ಕೆಮಿಕಲ್ಸ್ ಮತ್ತು ಕರೆಂಟ್ ಬಿಲ್ ಸೇರಿ ಸುಮಾರು 11 ಲಕ್ಷಕ್ಕಿಂತಲೂ ಮಿಕ್ಕಿ ಖರ್ಚು ವೆಚ್ಚವಿದೆ. ಇದೊಂದು ವೆಚ್ಚದಾಯಕ ನಿರ್ವಹಣೆಯಾಗಿರುತ್ತದೆ ಎಂದು ಹೇಳಿದರು.

ಈ ಈಜುಕೊಳದಲ್ಲಿ ವಿಧಿಸುವ ಶುಲ್ಕದ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಫಲಕದಲ್ಲಿ ಹಾಕಲಾಗಿದೆ ಹಾಗೂ ವಿಶೇಷ ಪರಿಣತಿ ಹೊಂದಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪದಕ ವಿಜೇತರಿಗೆ ರಿಯಾಯಿತಿ ದರದಲ್ಲಿ ಶುಲ್ಕವನ್ನು ವಿಧಿಸಿ ಮುಕ್ತ ಅವಕಾಶವನ್ನು ನೀಡಲಾಗಿದೆ. ಇಲ್ಲಿ ಈಗಾಗಲೇ ಎರಡು ರಾಷ್ಟ್ರಮಟ್ಟದ ಸ್ಪರ್ಧೆಗಳು ಜರಗಿದ್ದು ಹಾಗೂ ಅದಕ್ಕೆ ಬೇಕಾಗುವಂತಹ ಡೋಪಿಂಗ್ ಟೆಸ್ಟ್ನಂತಹ ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಅಲ್ಲದೆ ಸ್ಪೋರ್ಟ್ಸ್ ಸೈನ್ಸ್, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಕ ತರಬೇತಿ ಹಾಗೂ ಇನ್ನಿತರ ತರಬೇತಿಗಳನ್ನು ಕೊಡುವಂತ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಲಾಗಿದೆ ಎಂದರು
ಪ್ರಸ್ತುತ ಮಂಗಳೂರಿನ ಈಜು ಪಟುಗಳು ರಾಷ್ಟ್ರಮಟ್ಟದಲ್ಲಿ ಪದಕ ಪಡೆದ ನಂತರ ಉನ್ನತ ಮಟ್ಟದ ತರಬೇತಿಗಾಗಿ ಬೆಂಗಳೂರಿನಂತ ನಗರಕ್ಕೆ ವಲಸೆ ಹೋಗುವುದನ್ನು ನಾವು ನೋಡಬಹುದು. ಅಲ್ಲಿ ಅವರು ತಿಂಗಳಿಗೆ ಸುಮಾರು 50,000 ರಿಂದ 70,000 ವೆಚ್ಚ ಮಾಡಿ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಆದರೆ ಮಂಗಳೂರಿನಂತ ನಗರದಲ್ಲಿ ಅಂತಹ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಸುಮಾರು ರೂ.2 ಲಕ್ಷ ವೆಚ್ಚ ಮಾಡಿ ನಗರದಲ್ಲಿ ಲಭ್ಯವಿಲ್ಲದಂತಹ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ನೇಮಿಸಿ, ಆ ಮೂಲಕ ಉತ್ತಮ ತರಬೇತಿ ನೀಡುವಂತಹ ಸೌಲಭ್ಯವನ್ನು ಕಲ್ಪಿಸಿ. ಕೊಡಲು ಮುಂದಾಗಿದ್ದೇವೆ. ಈ ಸೌಲಭ್ಯವನ್ನು ದಕ್ಷಿಣ ಕನ್ನಡದ ಎಲ್ಲಾ ಈಜುಪಟುಗಳು ಮುಕ್ತವಾಗಿ ಬಳಸಿಕೊಳ್ಳಲು ಅವಕಾಶವಿದೆ ಎಂದರು.

ಅಲ್ಲದೆ ಮೂರುವರೆ ವರ್ಷದಿಂದ ಹಿಡಿದು ಹಿರಿಯ ನಾಗರೀಕರವರೆಗೆ ಯಾವುದೇ ವಯೋಮಿತಿಯ ನಿರ್ಬಂಧವಿಲ್ಲದೆ ತರಬೇತಿಯನ್ನು ನೀಡಲಾಗುವುದು. ಮಹಿಳೆಯರಿಗೆ ಈಜು ಕಲಿಯಲು ವಿಶೇಷವಾಗಿ ಮಹಿಳಾ ತರಬೇತುದರರು ಕೂಡ ಲಭ್ಯವಿದ್ದಾರೆ ಅಲ್ಲದೆ ವಿಶೇಷ ಚೇತನ ಮಕ್ಕಳಿಗೆ ಕೂಡ ಈಜು ತರಬೇತಿಯನ್ನು ನೀಡಲಾಗುತ್ತಿದೆ.
ಕಳೆದ ಮೂರು ತಿಂಗಳಲ್ಲಿ ಸುಮಾರು 3000 ಮಂದಿ ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಈಜು ಪಟುಗಳಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸ್ಮಾರ್ಟ್ ಸಿಟಿಯ ಮೂಲ ಯೋಜನೆಯ ಉದ್ದೇಶಕ್ಕೆ ಪೂರಕವಾಗಿ ಅಭಿವೃದ್ಧಿಗೆ ಅಗತ್ಯ ಇರುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನಾಗೇಂದ್ರ ನಾಯಕ್,ಲೋಕರಾಜ್ ವಿಠಲ್,ರೂಪ ಪ್ರಭು,ಶೆರ್ಲಿ ರೇಗೋ ,ಮಧುರಾಜ್ ರವರು ಉಪಸ್ಥಿತರಿದ್ದರು.

