ಶಹಜಹಾನ್ಪುರ : ಉತ್ತರಪ್ರದೇಶದ ಸಂಭಾಲ್ ಪೊಲೀಸರು ಐತಿಹಾಸಿಕ ಜಾಮಾ ಮಸೀದಿ ಸೇರಿದಂತೆ 10 ಕ್ಕೂ ಹೆಚ್ಚು ಮಸೀದಿಗಳನ್ನು ಮಾರ್ಚ್ 14 ರಂದು ಹೋಳಿ ಮೆರವಣಿಗೆಯ ಪ್ರಯುಕ್ತ ಮಸೀದಿಗಳಿಗೆ ಪ್ಲಾಸ್ಟಿಕ್ ಹಾಳೆಗಳು ಮತ್ತು ಟಾರ್ಪಾಲ್ಗಳಿಂದ ಮುಚ್ಚಲು ನಿರ್ಧರಿಸಿದ್ದಾರೆ. ಈ ವರ್ಷ ಹೋಳಿ ಹಬ್ಬ ಮತ್ತು ಪವಿತ್ರ ರಂಜಾನ್ ತಿಂಗಳ ಶುಕ್ರವಾರದ ಪ್ರಾರ್ಥನೆ ಒಂದೇ ದಿನವಾದುದ್ದರಿಂದ ಎರಡೂ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಹೋಳಿ ಹಬ್ಬದಂದು ಮುಸ್ಲಿಮರು ಮನೆಯೊಳಗೆ ಇರಬೇಕೆಂದು ಕೇಳಿದ ಸಂಭಾಲ್ ಪೊಲೀಸ್ ಅಧಿಕಾರಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮವನ್ನು ಕೈಗೊಂಡಿದೆ.


ಎರಡೂ ಸಮುದಾಯಗಳ ನಡುವಿನ ಪರಸ್ಪರ ಒಪ್ಪಂದದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.ಸಾಂಪ್ರದಾಯಿಕ ‘ಲಾತ್ ಸಾಹೇಬ್’ ಹೋಳಿ ಮೆರವಣಿಗೆಗೆ ಶಹಜಹಾನ್ಪುರವು ಹೆಚ್ಚಿನ ಭದ್ರತಾ ಕ್ರಮಗಳೊಂದಿಗೆ ಸಿದ್ಧವಾಗುತ್ತಿದೆ. ಮೆರವಣಿಗೆ ಮಾರ್ಗದ ಉದ್ದಕ್ಕೂ ಇರುವ ಮಸೀದಿಗಳನ್ನು ಬಣ್ಣಗಳಿಂದ ಕಲೆ ಮಾಡದಂತೆ ಟಾರ್ಪಾಲಿನ್ಗಳಿಂದ ಮುಚ್ಚಲಾಗಿದೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಸ್ಥಳೀಯ ಆಡಳಿತವು ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಒಳಗೊಂಡಂತೆ ಭದ್ರತಾ ವ್ಯವಸ್ಥೆಯನ್ನು ಸಹ ನಿಯೋಜಿಸಿದೆ.


ಹಿಂದೂ ದೇವಾಲಯದ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಆರೋಪದ ಆಧಾರದ ಮೇಲೆ ನ್ಯಾಯಾಲಯದ ಆದೇಶದ ಜಾಮಾ ಮಸೀದಿಯ ಸಮೀಕ್ಷೆಯ ನಂತರ ಕಳೆದ ನವೆಂಬರ್ನಿಂದ ಸಂಭಾಲ್ನಲ್ಲಿ ಉದ್ವಿಗ್ನತೆ ಉಂಟಾಗಿದೆ . ಸಮೀಕ್ಷೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ, ಐವರು ಸಾವನ್ನಪ್ಪಿ, 20 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.

