ಮಂಗಳೂರು : ಜಪ್ಪಿನಮೊಗರು ಪ್ರದೇಶದ ನಾಗಲ್ಲು ಉರುಂಡೆತೋಟ ಪ್ರದೇಶದಲ್ಲಿ ವಿಪರೀತ ಮಳೆಯಿಂದ ರಾಜಕಾಲುವೆಯ ತಡೆಗೋಡೆ ಕೊಚ್ಚಿ ಹೋಗಿ ತೋಚಿಲ, ನಾಗಲ್ಲು ಗಣೇಶನಗರ, ಹೊಯ್ಗೆ ರಾಶಿ, ವೈದ್ಯನಾಥನಗರ, ಬಜೆಹಿತ್ತಲು, ಅಂಗಡಿಮಾರು, ಪ್ರದೇಶಗಳಿಗೆ ಕೃತಕ ನೆರೆ ಬಂದು ಸಂಪೂರ್ಣ ಜಪ್ಪಿನಮೊಗರು ಗ್ರಾಮವೇ ಜಲಾವೃತಗೊಂಡು ಅಪಾರ ಪ್ರಮಾಣದ ಸೊತ್ತುಹಾನಿ ಉಂಟಾದ ಬಗ್ಗೆ ಹಾಗೂ ಸ್ಥಳೀಯ ಶಾಸಕರು ಹಾಗೂ ನಿಕಟಪೂರ್ವ ಕಾರ್ಪೊರೇಟರ್ ಶ್ರೀಮತಿ ವೀಣಾ ಮಂಗಳಾರವರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ನೆಪದಲ್ಲಿ ಪತ್ರಿಕೆ ಮತ್ತು ಟಿ.ವಿ ಮಾಧ್ಯಮಗಳಿಗೆ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆಂದು ಜಪ್ಪಿನಮೊಗರು ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಸುಧಾಕರ್ ಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಳೆದ 20-25 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಕಂಕನಾಡಿ ,ಪಂಪ್ವೆಲ್, ಎಕ್ಕೂರು ಮುಖಾಂತರ ಜಪ್ಪಿನಮೊಗರು ಪ್ರದೇಶದಲ್ಲಿ ಹಾದುಹೋಗುವ ರಾಜ ಕಾಲುವೆ ನಾಗಲ್ಲು ಉರುಂಡೆತೋಟ ಎಂಬಲ್ಲಿ ಸುಮಾರು 25 ಮೀಟರ್ ಗಳಷ್ಟು ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಇದರಿಂದಾಗಿ ಜಪ್ಪಿನಮೊಗರು ಗ್ರಾಮದ ಹಲವಾರು ಪ್ರದೇಶಗಳು ಜಲಾವೃತಗೊಂಡು ಅಲ್ಲಿರುವ ಮನೆ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಬೆಲೆಬಾಳುವ ವಸ್ತುಗಳು ನಷ್ಟವಾಗಿದೆ.

ಕಳೆದ 15 ದಿನಗಳಲ್ಲಿ ಮೂರು ನಾಲ್ಕು ಬಾರಿ ನೆರೆ ಪುನರ್ ವರ್ತನೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಲವಾರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಡೆನೀಸ್ ಡಿಸೋಜರವರು ಹಾಗೂ ಅಂದಿನ ಶಾಸಕ ಕೆ. ಜಯರಾಮ್ ಶೆಟ್ಟಿಯವರು ರಾಜಕಾಲುವೆಗೆ ಶಾಶ್ವತ ತಡೆಕೋಡೆ ಕಟ್ಟುವ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅಂದಿನ ರಾಜ್ಯಸಭಾ ಸದಸ್ಯರಾದ ಶ್ರೀ ಬಿ.ಜನಾರ್ಧನ್ ಪೂಜಾರಿಯವರೂ ಅನುದಾನ ಒದಗಿಸಿದ್ದರು.ಅದರೆ, ಕಳೆದ ಆರು ವರ್ಷಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ರಾಜಕಾಲುವೆಗೆ ಸಂಪೂರ್ಣ ಕಾಂಕ್ರೀಟೀಕೃತ ತಡೆಗೋಡೆ ನಿರ್ಮಿಸಲು ಕೋಟ್ಯಾಂತರ ಮೊತ್ತದ ಅನುದಾನ ದೊರಕಿದೆ ರಾಜ ಕಾಲುವೆಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು ಇನ್ನೊಂದು ಬದಿಯಲ್ಲಿ ಸಮರ್ಪಕವಾದ ತಡೆಗೋಡೆ ನಿರ್ಮಾಣವಾಗಿದೆ.

ಯಾಕೆಂದರೆ ಆ ಕ್ಷೇತ್ರದ ಕಾರ್ಪೊರೇಟರ್ ಬೇರೆಯವರಾಗಿದ್ದು ಅವರ ಕ್ಷೇತ್ರದಲ್ಲಿ ಈ ಕಾಮಗಾರಿ ಉತ್ತಮವಾದ ರೀತಿಯಲ್ಲಿ ನಡೆದಿದೆ. ಆದರೆ ಆದರೆ ನಮ್ಮ ಕ್ಷೇತ್ರದ ನಿಕಟಪೂರ್ವ ಕಾರ್ಪೊರೇಟರ್ರವರ ಅಸಡ್ಡೆಯೋ ರಾಜಕೀಯ ಕಾರಣವೋ? ಅಥವಾ ವೈಯಕ್ತಿಕ ಲಾಭಕ್ಕಾಗಿಯೋ ಗೊತ್ತಿಲ್ಲ? ಇಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿದ್ದಾರೆ ಆಕಾಶ್ ಕಟ್ಟಪುಣಿ ಎಂಬುವವರ ಮನೆಯಿಂದ ಸುಮಾರು 75 ಮೀಟರ್ ನಷ್ಟು ಉದ್ದಕ್ಕೂ ಯಾವುದೇ ತಡೆಗೋಡೆ ನಿರ್ಮಿಸದೆ ಹಳೆಯ ಮಣ್ಣಿನ ತಡೆಗೋಡೆ ರಕ್ಷಣೆಯಾಗಿದೆ. ಕಳೆದೆರಡು ವರ್ಷಗಳಿಂದ ಸ್ಥಳೀಯರು ಕಾರ್ಪೊರೇಟರ್ಗೆ ಕರೆ ಮಾಡಿದರೂ ಬಾರದೇ ಇದ್ದಾಗ ಮನವಿ ಮುಖಾಂತರ ಸಮಸ್ಯೆಯನ್ನು ತಿಳಿಸಿದಾಗ ಅದಕ್ಕೂ ಸ್ಪಂದಿಸದೆ ಮುಂದೆ ನೆರೆ ಬಂದಾಗ ನೋಡೋಣ ಎಂಬ ಉಡಾಫೆ ಮಾತುಗಳನ್ನು ಆಡಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಸಾಕ್ಷಿ ಇದೆ.

ಮಾರ್ಚ್- ಏಪ್ರಿಲ್ ತಿಂಗಳಲ್ಲಿ ರಾಜಕಾಲುವೆ ಹಾಗೂ ದೊಡ್ಡ ತೋಡುಗಳ ಹೂಳೆತ್ತುವ ಕಾರ್ಯ ನಡೆಯಬೇಕಿತ್ತು ಆದರೆ ಮೇ ತಿಂಗಳು ಆರಂಭವಾದ ನಂತರ ಜೆಸಿಪಿಯನ್ನು ರಾಜಕಾಲುವೆಗೆ ಇಳಿಸಿದ್ದು ಸಮರ್ಪಕವಾಗಿ ಕಾಮಗಾರಿ ನಡೆಸದೆ ಯಾವ ಜಾಗದಲ್ಲಿ ಕೊಚ್ಚಿ ಹೋಗಿದೆಯೋ ಅದೇ ಜಾಗದಲ್ಲಿ ಜೆಸಿಬಿ ತೋಡಿಗೆ ಇಳಿಸಿದ್ದು, ಇದು ಒಂದು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬಳಿ ದೊಡ್ಡ ತೋಡಿನ ಹೂಳೆತ್ತುವ ಕಾರ್ಯವೇ ನಡೆದಿಲ್ಲ ಯೇನಪೋಯ ಶಾಲಾ ಹಿಂಬದಿ ವೈದ್ಯನಾಥದ್ವಾರದ ಬಳಿ ಗೀತಾ ಗ್ಯಾರೇಜ್, ಕಡೆಕಾರ್ ಪರಿಸರದಲ್ಲೂ, ಕಾಮಗಾರಿ ನಡೆದಿಲ್ಲದಿರುವುದು ಪ್ರತ್ಯಕ್ಷವಾಗಿ ಕಾಣುತ್ತದೆ. ಇದರಲ್ಲಿ ನಗರ ಪಾಲಿಕೆಯ ಕಿರಿಯ ಅಭಿಯಂತರರ ಜ್ಞಾನದ ಕೊರತೆಯೋ ? ಅಥವಾ ನಿಕಟಪೂರ್ವ ಕಾರ್ಪೊರೇಟರ್ ಅವರ ಹಿತಾಸಕ್ತಿಗಾಗಿ ಮಾಡಿದ್ದರೋ ಗೊತ್ತಾಗುತ್ತಿಲ್ಲ.

ದಿನಾಂಕ:30-05-2025 ರಿಂದ ದಿನಾಂಕ:14-06-2025 ರವರೆಗೆ ವಿವಿಧ ದಿನಗಳಲ್ಲಿ ಬಾರಿ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದ್ದು ರಾಜ್ಯ ಮಟ್ಟದ ಟಿವಿ ಚಾನೆಲ್ ಗಳಲ್ಲಿ ವಿಷಯ ಬಿತ್ತರಿಸಿದ್ದರೂ, ಕಾಟಾಚಾರಕ್ಕೆ ಎಂಬಂತೆ 16-6-2025 ರಂದು ಸ್ಥಳೀಯ ಶಾಸಕರು ವೀಕ್ಷಣೆಗೆ ಬಂದು ತಮ್ಮ ಜವಾಬ್ದಾರಿಯನ್ನು ಮೆರೆತು ಇನ್ನೊಂದು ಪಕ್ಷದ ಕಡೆಗೆ ಕೈ ತೋರಿಸಿ ನುಣುಚಿಕೊಳ್ಳುವ ನೆಪದಲ್ಲಿ ಪತ್ರಿಕಾ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ.
ತನ್ನ ಸ್ವಾರ್ಥ, ತಾನು ಹೇಳಿದಂತೆ ಅಧಿಕಾರಿಗಳು ಕೇಳಬೇಕು, ತನಗೆ ಯಾರು ನಿರ್ದೇಶನ ನೀಡಬಾರದು ಎಂಬ ದರ್ಪ ಹಾಗೂ ವೈಯಕ್ತಿಕ ಲಾಭಕ್ಕಾಗಿ ಗ್ರಾಮದ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ನಿಕಟಪೂರ್ವ ಕಾರ್ಪೊರೇಟರ್ ಶ್ರೀಮತಿ ವೀಣಾಮಂಗಳ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸದೆ ಬೇಜವಾಬ್ದಾರಿಯ ಹೇಳಿಕೆಯನ್ನು ಕೊಡುವ ಶಾಸಕರ ಇದರ ಉತ್ತರದಾಯಿತ್ವವನ್ನು ವಹಿಸಬೇಕು ಹಾಗೂ ಗ್ರಾಮದ ಸಮಸ್ತ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿ ವೈಜ್ಞಾನಿಕವಾದ ಸೂಕ್ತ ತಡೆಗೋಡೆಯನ್ನು ನಿರ್ಮಿಸಿ ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕೆಂಬುದು ನಮ್ಮ ಆಗ್ರಹ ಎಂದರು.
ಪತ್ರಿಕಾಗೋಷ್ಟಿಯಲ್ಲಿ: ಮಾಜಿ ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾರ್, ಹರ್ಬಟ್ ಡಿ’ಸೋಜಾ ಕಡೇಕಾರ್, ತಾರನಾಥ ಭಂಢಾರಿ, ಶೇಖರ್ ಸನಿಲ್, ರವಿರಾಜ್ ಕಡೇಕಾರ್, ಪ್ರಶಾಂತ ಡಿಸೋಜಾ, ಕೀರ್ತನ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು

