ಇಸ್ಲಾಮಾಬಾದ್: ಭಾರತದೊಂದಿಗೆ ವಿಶ್ವಾಸ ಬೆಳೆಸಲು ಭಾರತ ಪ್ರಯತ್ನಿಸಲು ಸಿದ್ಧರಿದ್ದರೆ ಭಾರತಕ್ಕೆ ಬೇಕಾದ ಭಯೋತ್ಪಾದಕರನ್ನು ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

ಶುಕ್ರವಾರ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಲಷ್ಕರೆ ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸುತ್ತದೆಯೇ ಎಂಬ ಪ್ರಶ್ನೆಗೆ ಬಿಲಾವಲ್ ಅವರು “ಎರಡೂ ದೇಶಗಳ ನಡುವೆ ಸಮಗ್ರ ಚರ್ಚೆ ನಡೆದರೆ, ಭಯೋತ್ಪಾದನೆ ಮುಖ್ಯ ವಿಷಯವಾಗಿರುತ್ತದೆ. ಅದನ್ನು ಎದುರಿಸಲು ಪಾಕಿಸ್ತಾನ ಯಾವುದನ್ನೂ ವಿರೋಧಿಸುವುದಿಲ್ಲ ಎಂದು ನನಗೆ ಖಚಿತವಾಗಿದೆ” ಎಂದು ಭುಟ್ಟೋ ಹೇಳಿದರು.

2008 ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪ್ರಸ್ತುತ ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮಸೂದ್ ಅಜರ್ ಎಲ್ಲಿದ್ದಾನೆಂದು ತನಗೆ ತಿಳಿದಿಲ್ಲ ಮತ್ತು ಅವನು ಪಾಕಿಸ್ತಾನದಲ್ಲಿ ಇಲ್ಲ ಮತ್ತು ಅವನು ಅಫ್ಘಾನಿಸ್ತಾನದಲ್ಲಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಭುಟ್ಟೋ ಹೇಳಿದರು.


