ದುಬೈ : ಜುಲೈ ಏಳರಂದು ರವಿವಾರ ಕರಾಮದ ಅಲ್ ನಾಸರ್ ಲೀಸರ್ ಲ್ಯಾಂಡಿನ ಹಾಟ್ಸ್ಪಾಟ್ ಸಭಾಂಗಣದಲ್ಲಿ ಕೇಂದ್ರದ ಸರ್ವ ಕಲಾವಿದರು, ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಪೋಷಕರ ಒಗ್ಗೂಡುವಿಕೆಯಿಂದ, ಗುರು ಪೂಜೆ-ಗುರು ವಂದನಾ ಹಾಗೂ 2025-2026ನೇ ಸಾಲಿನ ನೂತನ ತರಗತಿಗಳ ಉದ್ಘಾಟನಾ ಸಮಾರಂಭ ಸಾಂಗವಾಗಿ ನೆರವೇರಿತು.

ಶ್ರೀಯುತ ಸಂತೋಷ್ ರಾವ್ ಇವರ ಪೌರೋಹಿತ್ಯದಲ್ಲಿ ಭಜನಾ ಸಹಿತವಾಗಿ ಗುರುಪೂಜೆ ನಡೆಯಿತು.ಆ ಬಳಿಕ ಅತಿಥಿ ಗಣ್ಯರ ಸಮಕ್ಷಮದಲ್ಲಿ 2025-2026 ನೇ ಸಾಲಿನ ನೂತನ ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು.

ಈ ಸಂಧರ್ಭದಲ್ಲಿ ಶ್ರೀಕ್ಷೇತ್ರ ಕಟೀಲಿನಲ್ಲಿ ಕೇಂದ್ರದ ಕಲಾವಿದರು ನಡೆಸಿಕೊಡಲಿರುವ ಯಕ್ಷಗಾನ ಸೇವೆ, “ಮಣಿಕಂಠ ಮಹಿಮೆ” ಪ್ರಸಂಗದ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಕೇಂದ್ರದ ವಿದ್ಯಾರ್ಥಿಗಳು, ಪೋಷಕರು ಸೇರಿ, ಕೇಂದ್ರದ ಗುರುಗಳಾದ ಶ್ರೀಯುತ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ಶ್ರೀಯುತ ಶರತ್ ಕುಡ್ಲ, ಶ್ರೀಯುತ ಸವಿನಯ ನೆಲ್ಲಿತೀರ್ಥರಿಗೆ ಗುರುವಂದನೆ ಸಲ್ಲಿಸಿದರು. ಗುರುಗಳು ಗುರುಪೂಜೆಯ ಸಂದೇಶವನ್ನು ನೀಡಿ, ಎಲ್ಲರಿಗೂ ಶುಭ ಹಾರೈಸಿದರು.

ಶ್ರೀಯುತ ರಾಘವೇಂದ್ರ ಭಟ್ ಕಟೀಲು,ರಾಜೇಶ್ ಕುತ್ತಾರು, ಜಯಾನಂದ ಪಕ್ಕಳ, ಧನಂಜಯ ಶೆಟ್ಟಿಗಾರ್, ಪ್ರಭಾಕರ ಸುವರ್ಣ,ಕಿರಣ್ ಕುಮಾರ್,ಮಾಧ್ಯಮ ಪ್ರತಿನಿಧಿಗಳಾದ ಸಂತೋಷ್ ಶೆಟ್ಟಿ ಪೊಳಲಿ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ,ಕೇಂದ್ರದ ಸಂಚಾಲಕರಾದ ಶ್ರೀಯುತ ದಿನೇಶ ಶೆಟ್ಟಿ ಕೊಟ್ಟಿಂಜ, ಬಾಲಕೃಷ್ಣ ಶೆಟ್ಟಿ ಮಾಡುರುಗುತ್ತು ಮೊದಲಾದವರು ಗುರುಪೂಜೆಯ ಮಹತ್ವವನ್ನು ವಿವರಿಸಿ ಶುಭಹಾರೈಸಿದರು. ಗಿರೀಶ್ ನಾರಾಯಣ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


ಕೇಂದ್ರದ ವತಿಯಿಂದ ನಡೆಯುವ ವಿವಿಧ ಅಭ್ಯಾಸ ತರಗತಿಗಳ ವಿವರಣೆಯನ್ನು ಆಸಕ್ತರ ಗಮನಕ್ಕಾಗಿ ನೀಡಲಾಗಿದೆ.
ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ.ಇ ಸಂಸ್ಥೆಯಲ್ಲಿ ಸಧ್ಯ ಲಭ್ಯವಿರುವ ವಿಶೇಷ ತರಗತಿಗಳು ಈ ರೀತಿ ಇವೆ:👇🏻
•ಯಕ್ಷಗಾನ ನಾಟ್ಯ (ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳು)-ಅಭಿನಯ ತರಬೇತಿ.
•ಪೂರ್ವರಂಗ-ಉತ್ತರರಂಗ ವೈವಿಧ್ಯಗಳ ತರಬೇತಿ.
•ವಿಶೇಷ ರಂಗಕ್ರಮಗಳ ಪ್ರಾತ್ಯಕ್ಷಿಕೆ.
•ಆಯ್ದ ಪ್ರಸಂಗ –ರಂಗಪಠ್ಯಗಳ ತರಬೇತಿ.
•ರಾಮಾಯಣ-ಮಹಾಭಾರತ-ಭಗವದ್ಗೀತೆ, ಪಂಚತಂತ್ರ ಇತ್ಯಾದಿ ಪುರಾಣ ಕಾವ್ಯ – ಕಥನ ಅಧ್ಯಯನ.
•ಭಾಗವತಿಕೆ ಮತ್ತು ಚೆಂಡೆ-ಮದ್ದಳೆ .- ಆನ್ ಲೈನ್ ತರಗತಿಗಳು.
•ಪ್ರಸಾಧನ (ಮೇಕಪ್)- ವೇಷಭೂಷಣ ತರಬೇತಿ – ವಾರ್ಷಿಕ ವಿಶೇಷ ಶಿಬಿರಗಳ ಮೂಲಕ ನಡೆಸುತ್ತಿದೆ.
- ತಾಳಮದ್ದಳೆ ಅಭ್ಯಾಸ ಕೂಟ.
•ರಜಾಕಾಲದ ವಿಶೇಷ ತರಗತಿ- ಯಕ್ಷಗಾನ ಪೂರಕ ಚಿತ್ರಕಲೆ- ಯೋಗಾಭ್ಯಾಸಗಳ ತರಬೇತಿ.
•ಕನ್ನಡ ತಿಳಿಯದ ಮಕ್ಕಳಿಗೆ ಕನ್ನಡ ಭಾಷಾ ಅಭ್ಯಾಸ ತರಗತಿ ನಡೆಸಲಾಗುತ್ತಿದೆ. ಇದರಡಿ, ವ್ಯಾಕರಣ ಪಾಠ, ಛಂದಸ್ಸು-ಪರಿಚಯ, ಕಾವ್ಯ ಭಾಗಗಳ ಅಧ್ಯಯನ, ಆಶುಭಾಷಣ ಮತ್ತಿತರ ಸಾಹಿತ್ಯ ಪ್ರಕಾರಗಳ ಅಭ್ಯಾಸ ಇತ್ಯಾದಿ.
•ಪೂರ್ವ ಪ್ರಾಥಮಿಕ, ಪ್ರಾಥಮಿಕ ವಿಭಾಗ ಮತ್ತು ಪ್ರೌಢ ವಿಭಾಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಿ ಅರ್ಹತಾ ಪತ್ರ ನೀಡುತ್ತಿದೆ. ಅಲ್ಲದೆ ಕರ್ನಾಟಕ ಸರಕಾರ ಪ್ರಯೋಜಿತ ಕರ್ನಾಟಕ ಯಕ್ಷಗಾನ ಅಕಾಡೆಮಿ ನಡೆಸಲುದ್ದೇಶಿಸಿರುವ ಯಕ್ಷಗಾನ ಪರೀಕ್ಷೆಗಳಿಗೆ ಅಕಾಡೆಮಿಯ ಪಠ್ಯಕ್ರಮದಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯವನ್ನೂ ಮಾಡುತ್ತಿದೆ.





