ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ “ಸಹಕಾರಿ ಪಿತಾಮಹ“ ಮೊಳಹಳ್ಳಿ ಶಿವರಾಯರ 145ನೇ ಜನ್ಮ ದಿನಾಚರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾಯರ 145ನೇ ಜನ್ಮ ದಿನಾಚರಣೆಯನ್ನು ಸೋಮವಾರ ಬೆಳಗ್ಗೆ ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, “ನಾವು ಇಷ್ಟು ಎತ್ತರಕ್ಕೆ ಬೆಳೆಯಲು ಮೊಳಹಳ್ಳಿ ಶಿವರಾಯರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ಅವರ ಯೋಚನೆ ಮತ್ತು ಯೋಜನೆಗಳಿಂದ ಸಹಕಾರಿ ಕ್ಷೇತ್ರ ಇಂದು ಸಮೃದ್ಧವಾಗಿ ಬೆಳೆದಿದೆ. ಮೊಳಹಳ್ಳಿ ಅವರನ್ನು ರಾಜಕಾರಣಿಗಳು ಮರೆತಿದ್ದಾರೆ. ಆದರೆ ನಾವು ಮಾತ್ರ ಮರೆತಿಲ್ಲ ಮರೆಯುವುದು ಕೂಡ ಇಲ್ಲ. ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಆಚರಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸುತ್ತ ಬಂದಿದೆ. ನಮ್ಮ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕೃಷಿಕರಿಗೆ ಬೆಂಗಾವಲಾಗಿ ಎಸ್ ಸಿಡಿಸಿಸಿ ಬ್ಯಾಂಕ್ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ ಅಭೂತಪೂರ್ವ ಸಾಧನೆಯನ್ನು ಮಾಡಿದೆ“ ಎಂದರು.

ಬಳಿಕ ಮಾತಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು ಅವರು, “ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಮುಂದುವರಿಯಲು ಅನೇಕ ಮಂದಿ ಅಡಿಗಲ್ಲು ಹಾಕಿದ್ದಾರೆ. ಇವರಲ್ಲಿ ಮೊಳಹಳ್ಳಿ ಶಿವರಾಯರು ಒಬ್ಬರು. ಇವರ ಪರಿಶ್ರಮದಿಂದಾಗಿ ಜಿಲ್ಲೆ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಇತಿಹಾಸ ತಿಳಿಯದವರು ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಾಗೆಯೇ ಸಹಕಾರಿ ಕ್ಷೇತ್ರದ ಬಗ್ಗೆ ಅಧ್ಯಯನವನ್ನು ಮಾಡದೇ ಈ ಕ್ಷೇತ್ರವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಮೊಳಹಳ್ಳಿ ಅವರು ರಾಜಕೀಯ ಮತ್ತು ಸ್ಥಳೀಯಾಡಳಿತದಲ್ಲೂ ಸಕ್ರಿಯರಾಗಿದ್ದವರು. ಆದರೆ ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ದೀರ್ಘ ಯೋಚನೆ ಮತ್ತು ಯೋಗ್ಯ ಚಿಂತನೆಯಿಂದಾಗಿ ಅವರು ಇಂದಿನ ಕಾಲಘಟ್ಟದಲ್ಲೂ ಸ್ಮರಣೆಗೆ ಯೋಗ್ಯರು“ ಎಂದರು.
ಇದೇ ಸಂದರ್ಭದಲ್ಲಿ ಕರಾವಳಿ ಸಹಕಾರಿ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ವೇದಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡಿಗೆ, ಹಾಲು ಉತ್ಪಾದಕರ ಸಂಘದ ರವಿರಾಜ್ ಹೆಗ್ಡೆ, ವಿನಯ್ ಕುಮಾರ್ ಸೂರಿಂಜೆ, ಐಕಳ ಭಾವ ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ, ರಮೇಶ್, ಸಂಗೀತಾ, ಬ್ಯಾಂಕ್ ಸಿಇಓ ಗೋಪಾಲಕೃಷ್ಣ ಭಟ್, ಬ್ಯಾಂಕ್ ನಿರ್ದೇಶಕರು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ಬೊಳ್ಯೊಟ್ಟು ಶಶಿಕುಮಾರ್ ರೈ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.

