ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಾತಾ ಅಮೃತಾನಂದಮಯಿ ಭಕ್ತರ ಅಮೃತ ಕುಟುಂಬ ಮತ್ತು ಸ್ವಸಹಾಯ ಗುಂಪುಗಳಾದ ಅಮೃತ ಶ್ರೀ ಸದಸ್ಯರುಗಳ ಸಮಾವೇಶ ” ಅಮೃತ ಶಕ್ತಿ ಸಂಗಮ” ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾನುವಾರ ನೆರವೇರಿತು.
ಕರಾವಳಿ ಜಿಲ್ಲೆಗಳಲ್ಲಿ ಸೇವಾ ನಿರತರಾದ ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿದ್ದರು.
ಭಕ್ತಿಪ್ರದ ಸಾಂಸ್ಕೃತಿಕ ಕಾರ್ಯಕ್ರಮ ಅಮ್ಮನ ಜೀವನ ಚರಿತ್ರೆಯನ್ನಾಧರಿಸಿದ ಹರಿಕಥೆಯೊಂದಿಗೆ ಆರಂಭವಾಯಿತು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಗಣೇಶ್ ಎರ್ಮಾಳ್ ಮುಂಬಯಿ ಇವರು
ಹರಿನಾಮ ಸಂಕೀರ್ತನೆಯೊಂದಿಗೆ ಅಮ್ಮನ ಅವತರಣದ ಮಹಾತ್ಮೆಗಳನ್ನು ಹಾಡಿಕೊಂಡಾಡಿದರು.

ಅಮ್ಮನ ಭಕ್ತರು ಕಳೆದ 25 ವರ್ಷಗಳಲ್ಲಿ ಅಮ್ಮನ ಸಂಪರ್ಕ ಪಡೆದು ಅನುಭವಿಸಿದ ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.ವಿವಿಧ ಅಮೃತ ಕುಟುಂಬದ ಸದಸ್ಯರಾದ ಮಾಲತಿ ಪುಂಡಲೀಕ ಬಂಗೇರ ಬೀಜಾಡಿ,, ಶುಭ ಭಂಡಾರ್ಕಾರ್ ಪೆರ್ಡೂರು, ರವಿರಾಜ್ ಶೆಟ್ಟಿ ಕಡಬ, ನಳಿನಿ ಶೇಖರ್ ಕಡೇಕಾರ್,ವತ್ಸಲ ಪೂಜಾರಿ ಮಂಗಳೂರು, ಜಯಂತಿ ಕುಂದಾಪುರ ,ವೇದ ಶಿವರಾಮ್ ಏನೆಕಲ್ ರವರು ಅಮೃತ ಕುಟುಂಬ ಹಾಗೂ ಸ್ವಸಹಾಯ ಗುಂಪುಗಳ ಸೇವಾ ಸಾಧನೆ ಹಾಗೂ ಅಮ್ಮನ ಅನುಗ್ರಹದಿಂದ ಪ್ರತ್ಯಕ್ಷವಾಗಿ ಅನುಭವಿಸಿದ ರೋಮಾಂಚಕಾರಿ ಅನುಭವಗಳನ್ನು ಹಂಚಿಕೊಂಡರು.

ಅಮೃತ ಕುಟುಂಬ ಮತ್ತು ಅಮೃತ ಶ್ರೀ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿಯವರು ಮಾತನಾಡಿ ಅಮೃತ ಶಕ್ತಿ ಸಂಗಮದ ಉದ್ದೇಶ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಆಶೀರ್ವಚನವಿತ್ತು ನುಡಿದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಇಲ್ಲಿನ ಸೇವಾಮನೋಭಾವದ ಭಕ್ತರ ಬಗ್ಗೆ ಒಲವು ಹೊಂದಿದ್ದು ಇಲ್ಲಿನ ಭಕ್ತರು ಕೂಡಾ ಅಮ್ಮನ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದಾರೆ ಎಂದರು.
ಅಮೃತ ಶ್ರೀ ಸ್ವಸಹಾಯ ಗುಂಪುಗಳು ತಮ್ಮ ಕಾರ್ಯ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವಂತೆ ಕರೆಯಿತ್ತರು.

ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್ ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಅಮೃತ ಕುಟುಂಬದ ಹಿರಿಯ ಸದಸ್ಯರಾದ ಭೋಜರಾಜ್ ಕರ್ಕೇರ ದಂಪತಿಗಳು ಶ್ರೀ ಗುರುಪಾದುಕಾ ಪೂಜೆ ಮಾಡಿದರು, ಭಜನಾ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ಮಾಡಲಾಯಿತು.

